ಬಿಜೆಪಿಯ ಮತಗಳ್ಳತನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು : ಬಿಜೆಪಿಯ ಮತಕಳ್ಳತನ ಖಂಡಿಸಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಉರ್ವ ಮಾರ್ಕೆಟ್ ಪ್ರತಿಭಟನೆ ನಡೆಸಲಾಯಿತು.
ವೋಟ್ ಚೋರ್-ಗದ್ದಿ ಚೋಡ್, ಮತಗಳ್ಳತನ ಮಾಡಿದವರು ಹುದ್ದೆಯಿಂದ ತೊಲಗಿ-ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ನಡೆದ ಪ್ರತಿಭಟನಾ ಸಭೆಯಲ್ಲಿ ನೂರಾರು ಮಂದಿ ತಮ್ಮ ಸಹಿ ಹಾಕುವ ಮೂಲಕ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ, ಮತಗಳ್ಳತನ ಅಘಾತಕಾರಿ ಬೆಳವಣಿಗೆಯಾಗಿದೆ. ಪ್ರತಿಯೊಬ್ಬರ ಮತವನ್ನು ಕಸಿದುಕೊಳ್ಳುವ ಕ್ರಮವು ಈ ದೇಶದಲ್ಲಿ ಕಾನೂನು ಬಾಹಿರವಾದದ್ದಾಗಿದೆ. ಬಿ.ಆರ್.ಅಂಬೇಡ್ಕರ್ ಕೊಟ್ಟತಂಹ ಸಂವಿಧಾನದಲ್ಲಿ ಪ್ರತಿಯೊಬ್ಬರು ಒಂದು ಮತದಾನವನ್ನು ನೀಡುವ ಮೂಲಕ ಪ್ರತಿಯೊಬ್ಬರ ಮತದಾನವು ಒಂದೇ ಆಗಿರುವುದು ಪ್ರಜಾಪ್ರಭುತ್ವದ ವೈಭವವಾಗಿದೆ. ಇದನ್ನು ಸಹಿಸದ ಬಿಜೆಪಿ ಧರ್ಮ-ಜಾತಿಯನ್ನು ಎಳೆದು ತರುವ ಮೂಲಕ ಜನರಲ್ಲಿ ಕಂದಕ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಜೆ.ಅರ್. ಲೋಬೊ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಮುಡಾ ಅಧ್ಯಕ್ಷ ಡಾ.ಬಿ.ಜಿ.ಸುವರ್ಣ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯಕ್, ರೂಪಾ ಚೇತನ್, ಒಲ್ವಿನ್ ಕ್ಯಾಸ್ಟಲಿನೋ, ಪಣಿಕ್ಕರ್ ಮಾತನಾಡಿದರು.
ಪ್ರಕಾಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕಾರ್ಪೊರೇಟರ್ಗಳಾದ ಪ್ರೇಮ್ ಬಲ್ಲಾಲ್ಬಾಗ್, ತನ್ವೀರ್ ಷಾ, ಸತೀಶ್ ಪೆಂಗಲ್, ಕಾಂಗ್ರೆಸ್ ನಾಯಕರಾದ ಟಿ.ಕೆ.ಸುಧೀರ್, ಆಲ್ಟೇನ್ ಡಿಕುನ್ಹ, ಮೀನಾ ಟೆಲ್ಲಿಸ್, ರಿತೇಶ್ ಶಕ್ತಿನಗರ, ಯೋಗೇಶ್ ನಾಯಕ್, ಜೇಮ್ಸ್ ಪ್ರವೀಣ್, ಶಾಂತಲಾ ಗಟ್ಟಿ, ಚಂದ್ರಹಾಸ ಪೂಜಾರಿ ಕೋಡಿಕಲ್ ಭಾಗವಹಿಸಿದ್ದರು. ಪಿ.ಸಿ ಗಣೇಶ್ ಸ್ವಾಗತಿಸಿದರು. ಚೇತನ್ ವಂದಿಸಿದರು.







