ದೇರಳಕಟ್ಟೆ: ಅಲ್ ಸಲಾಮ ವತಿಯಿಂದ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ

ಉಳ್ಳಾಲ: ಮುಸ್ಲಿಂ ಸಮುದಾಯದ ಯುವಕರು ಸರ್ಕಾರಿ ಕೆಲಸದ ಬಗ್ಗೆ ನಿರಾಸಕ್ತಿ ಹೊಂದಿದ ಕಾರಣ ಸರ್ಕಾರಿ ಉದ್ಯೋಗಿಗಳ ಕೊರತೆಯಿಂದಾಗಿ ಸಮಾಜದಲ್ಲಿ ಅಶಾಂತಿಗೂ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಜೀವನದಲ್ಲೇ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸುವುದು ಅಗತ್ಯ ಎಂದು ಜಮೀಯತುಲ್ ಫಲಾಹ್ ದ.ಕ.ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ನಾಸೀರ್ ಕೆಕೆ ಅಭಿಪ್ರಾಯಪಟ್ಟರು.
ದೇರಳಕಟ್ಟೆ ಅಲ್ ಸಲಾಮ ವತಿಯಿಂದ ನಡೆದ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಮೀಯತುಲ್ ಫಲಾಹ್ ಉಳ್ಳಾಲ ತಾಲೂಕು ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್ ಮಾತನಾಡಿ, ಸಮುದಾಯದಲ್ಲಿ ಶಿಕ್ಷಣ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು, ಶಿಕ್ಷಣಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳನ್ನು ಪ್ರೋತ್ಸಾಹಿಸುವುದು ಜಮೀಯತುಲ್ ಫಲಾಹ್ ನ ಮೂಲ ಉದ್ದೇಶ, ಈ ಎರಡು ಕಾರ್ಯಕ್ರಮ ಎಲ್ಲಿ ನಡೆದರೂ ಸಂಸ್ಥೆ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಮೇಲ್ತೆನೆ ಅಧ್ಯಕ್ಷ ಇಬ್ರಾಹಿಂ ತಪ್ಷಿಯಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮುಗಿದ ಕೂಡಲೇ ಉದ್ಯೋಗ ಅರಸಿ ವಿದೇಶಕ್ಕೆ ತೆರಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಎಸ್ಸೆಸ್ಸೆಎಲ್ಸಿ ಹಂತದಲ್ಲೇ ಮಕ್ಕಳಿಗೆ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ನೀಡುವುದು ಅಗತ್ಯ ಎಂದರು.
ಈ ಸಂದರ್ಭ ಶೈಕ್ಷಣಿಕ ಸಾಧನೆಗಾಗಿ ಸಂಸ್ಥೆಯ ಹಳೆವಿದ್ಯಾರ್ಥಿನಿ ಆಶುರಾ ಅಳಿಕೆ ಅವರನ್ನು ಅಭಿನಂದಿಸಲಾಯಿತು.
ಅಭಿ ಗೌಡ ಬೆಂಗಳೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ಸಂಸ್ಥೆಯ ಸಂಸ್ಥಾಪಕ ಇಕ್ಬಾಲ್ ಬಾಳಿಲ,
ಕರ್ನಾಟಕ ಮುಸ್ಲಿಂ ಭಾಂದವ್ಯ ವೇದಿಕೆ ಅಧ್ಯಕ್ಷ ಝಾಕಿರ್ ಹುಸೈನ್, ಪತ್ರಕರ್ತರ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಅನ್ಸಾರ್ ಇನೊಳಿ, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ನಝೀರ್ ಬೆಳುವಾಯಿ, ನಿಸಾರ್ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಸಂಯೋಜಕ ಶೇಖ್ ಮುಹಮ್ಮದ್ ಇರ್ಫಾನಿ ಕಾರ್ಯಕ್ರಮ ನಿರೂಪಿಸಿದರು.







