ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಅವಧಿ ಮೀರಿದ ಕಡತಗಳ ನಾಶ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾಖಲಾದ ಪ್ರಕರಣಗಳಲ್ಲಿ 2016ರ ಜನವರಿ 1 ರಿಂದ 2020ರ ಡಿ.31 ರ ಅವಧಿಯಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳ ಕಡತಗಳನ್ನು ನಾಶಪಡಿಸುತ್ತಿರುವುದರಿಂದ, ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಆಯೋಗ, ರಾಷ್ಟ್ರೀಯ ಆಯೋಗ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳಲ್ಲಿ ಮೇಲ್ಮನವಿ ಸಲ್ಲಿಸಿರುವ ಅಥವಾ ತಡೆಯಾಜ್ಞೆ ಇರುವ ಪ್ರಕರಣಗಳ ಮಾಹಿತಿಯನ್ನು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರು(ಪ್ರಭಾರ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದೂರುದಾರರು/ಎದುರುದಾರರು/ವಕೀಲರು ನ.27 ರೊಳಗೆ ಮೇಲ್ಕಂಡ ಅವಧಿಯ ಪ್ರಕರಣಗಳಲ್ಲಿ ಯಾವುದಾದರೂ ದಾಖಲಾತಿಗಳು, ಆದೇಶಗಳು ಮತ್ತು ಇತರ ದಾಖಲೆಗಳ ದೃಢೀಕೃತ ಪ್ರತಿಗಳು ಬೇಕಿದ್ದಲ್ಲಿ ಪಡೆದುಕೊಳ್ಳಲು ಮತ್ತು ಮೂಲ ದಾಖಲಾತಿಗಳಿದ್ದಲ್ಲಿ ವಾಪಾಸ್ಸು ಪಡೆಯಲು ಸೂಚಿಸಿದೆ. ನ.27 ರ ನಂತರ ಕಡತಗಳನ್ನು ಕಡ್ಡಾಯವಾಗಿ ನಾಶಗೊಳಿಸಲು ಕ್ರಮವಹಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರು(ಪ್ರಭಾರ) ಮಾಹಿತಿ ನೀಡಿದ್ದಾರೆ.





