ಧರ್ಮಸ್ಥಳ ಪ್ರಕರಣ; ಯುಟ್ಯೂಬರ್ಗಳ ವಿಚಾರಣೆ ಮುಗಿಸಿದ ಎಸ್ ಐ ಟಿ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಗಾಗಿದ್ದ ಯುಟ್ಯೂಬರ್ಗಳಾದ ಅಭಿಷೇಕ್ ಹಾಗೂ ಮನಾಫ್ ಅವರ ವಿಚಾರಣೆಯನ್ನು ಹಾಗೂ ಹೇಳಿಕೆ ದಾಖಲಿಸುವ ಕಾರ್ಯವನ್ನು ಎಸ್.ಐ.ಟಿ ತಂಡ ಬುಧವಾರ ಪೂರ್ಣಗೊಳಿಸಿದೆ.
ಯುಟ್ಯೂಬರ್ ಅಭಿಷೇಕ್ ಅವರನ್ನು ಕಳೆದ ಒಂದು ವಾರದಿಂದ ಎಸ್.ಐ.ಟಿ ತಂಡ ವಿಚಾರಣೆ ನಡೆಸಿತ್ತು. ಇವರಿಂದ ಮೊಬೈಲನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬಂಗ್ಲೆ ಗುಡ್ಡದಿಂದ ತಲೆ ಬುರುಡೆ ತೆಗೆಯುವ ವಿಡಿಯೋವನ್ನು ಇವರು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಈತನ ವಿಚಾರಣೆ ನಡೆಸಿ ಹೇಳಿಕೆ ಪಡೆಯುವ ಕಾರ್ಯ ಪೂರ್ಣಗೊಂಡಿದೆ.
ಕಳೆದ ಮೂರು ದಿನಗಳಿಂದ ಕೇರಳದ ಯುಟ್ಯೂಬರ್ ಮನಾಫ್ ಅವರ ವಿಚಾರಣೆ ನಡೆಯುತ್ತಿತ್ತು. ಬುಧವಾರ ರಾತ್ರಿಯ ವೇಳೆಗೆ ಅವರ ವಿಚಾರಣೆ ಹಾಗೂ ಹೇಳಿಕೆ ನೀಡುವ ಕಾರ್ಯ ಪೂರ್ಣಗೊಂಡಿದ್ದು, ಅವರು ಹಿಂತಿರುಗಿದ್ದಾರೆ.
ವಿಚಾರಣೆ ಮುಗಿಸಿ ಹೊರಬಂದ ಮನಾಫ್ ಮಾತನಾಡಿ, "ಎಸ್.ಐ.ಟಿ ತನಿಖೆ ಅತ್ಯಂತ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ನಮ್ಮಲ್ಲಿ ಕೇಳಿದ ಎಲ್ಲ ಮಾಹಿತಿಗಳನ್ನು ನೀಡಿದ್ದೇವೆ. ವಿಚಾರಣೆ ಹಾಗೂ ಹೇಳಿಕೆ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ವಿಚಾರಣೆಗೆ ಬರಲು ಸೂಚಿಸಿಲ್ಲ" ಎಂದು ತಿಳಿಸಿದರು.







