ಧರ್ಮಸ್ಥಳ ಕೊಲೆ ಆರೋಪಗಳ ತನಿಖೆ | ಸರಕಾರ ಪ್ರಣಬ್ ಮೊಹಾಂತಿಯವರ ನೇಮಕವನ್ನು ರದ್ದುಗೊಳಿಸಲಿ: ಮಾಜಿ ಡಿಎಎಸ್ಪಿ ಅನುಪಮಾ ಶೆಣೈ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಕೊಲೆ ಆರೋಪಗಳ ತನಿಖೆಗೆ ಸರಕಾರ ಪ್ರಣಬ್ ಮೊಹಾಂತಿಯವರ ನೇಮಕವನ್ನು ರದ್ದುಗೊಳಿಸಿ ಡಾ.ಕೆ.ರಾಮಚಂದ್ರ ರಾವ್ ಅಥವಾ ದಯಾನಂದ್ರವರನ್ನು ಈ ಕೂಡಲೆ ಈ ತನಿಖಾ ತಂಡದ ಉಸ್ತುವಾರಿಯಾಗಿ ನೇಮಕ ಮಾಡಬೇಕು ಎಂದು ಮಾಜಿ ಡಿಎಎಸ್ಪಿ ಅನುಪಮಾ ಶೆಣೈ ಆಗ್ರಹಿಸಿದ್ದಾರೆ.
ನಗರದ ಪ್ರೆಸಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅತ್ಯಾಚಾರ ಮತ್ತು ನರಹತ್ಯೆ ಕುರಿತಾದ ತನಿಖೆಗೆ ಇವರು ಸೂಕ್ತ ವ್ಯಕ್ತಿಯಲ್ಲ ಎಂದು ಪೊಲೀಸರೇ ಹೇಳುತ್ತಿದ್ದಾರೆ. ಈ ಎಸ್ ಐಟಿ ತಂಡದಲ್ಲಿ ಒಟ್ಟು 20 ಕೆ ಎಸ್ ಪಿ ಅಧಿಕಾರಿಗಳು, ಮತ್ತು 4 ಐಪಿಎಸ್ ಅಧಿಕಾರಿಗಳಿದ್ದಾರೆ. ಅನುಚೇತ್ ಎಂ.ಎನ್. ಮತ್ತು ಡಾ.ಸೌಮ್ಯಲತರವರು ಕನ್ನಡಿಗರು. ಉಳಿದ 20 ಕೆಎಎಸ್ ಪಿ ಅಧಿಕಾರಿಗಳೂ ಸಹ ಕನ್ನಡಿಗರು. ಈ ಕನ್ನಡಿಗ ಅಧಿಕಾರಿಗಳ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಈಗ ಚರ್ಚೆಯಾಗುತ್ತಿದೆ ಎಂದು ಅವರು ಹೇಳಿದರು.
ಈ ಹಿಂದೆ ಮಂಗಳೂರಿನ ಚರ್ಚ್ ಗಲಭೆಯ ರಾಜಕೀಯದಿಂದಾಗಿ- ಕನ್ನಡಿಗ ಡಿವೈಎಸ್ಪಿ ಎಂ.ಕೆ.ಗಣಪತಿಯವರು ಸಚಿವ ಕೆ.ಜೆ.ಜಾರ್ಜ್ರಿಂದಾಗಿ ಬಹಳಷ್ಟು ಕಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಾಗ ಡಿವೈಎಸ್ಪಿ ಗಣಪತಿಯವರು ಕೆ.ಜೆ.ಜಾರ್ಜ್ ಜತೆ ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿಯವರ ಹೆಸರನ್ನೂ ಸಹ ಉಲ್ಲೇಖಿಸಿದ್ದರು. ಹೀಗಾಗಿ ಎಸ್ ಐಟಿ ತಂಡದ ಮುಖಂಡರಾಗಿ ಪ್ರಣಬ್ ಮೊಹಾಂತಿಯವರ ನೇಮಕದಲ್ಲಿ ಕೆ.ಜೆ.ಜಾರ್ಜ್ರವರ ಕೈವಾಡ ಇದೆ ಎಂದೇ ಪೊಲೀಸರು ಹೇಳುತ್ತಿದ್ದಾರೆ. ಈಗ 22 ಕನ್ನಡಿಗ ಅಧಿಕಾರಿಗಳ ನೇತೃತ್ವವನ್ನು ಪ್ರಣಬ್ ಮೊಹಾಂತಿಯವರಿಗೆ ನೀಡಿರುವುದರಿಂದ ಪೊಲೀಸ್ ಇಲಾಖೆಯ ಜಂಘಾಬಲವೇ ಉಡುಗಿಹೋಗಿದೆ. ಧರ್ಮಸ್ಥಳದ ಗೋರಿಗಳಿಂದ ಶವಗಳನ್ನು ಎತ್ತುವ ಕೆಲಸ ಮುಗಿದ ಬಳಿಕ ಫ್ಯಾನಿಗೆ ನೇಣು ಹಾಕಿಕೊಂಡು ಸಾಯಲಿರುವ ಪೊಲೀಸ್ ಅಧಿಕಾರಿಗಳ ಶವವನ್ನು ಇಳಿಸುವ ಕೆಲಸ ಶುರುವಾಗಲಿದೆಯೇ ಎಂದು ಪೊಲೀಸರು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.







