ಪಣಂಬೂರು ಪೊಲೀಸ್ ಠಾಣೆಗೆ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಭೇಟಿ

ಮಂಗಳೂರು: ಬೆಂಗರೆಯ ಎಆರ್ಕೆ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕಾನೂನು ಜಾಗೃತಿ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ನೇರ ಅನುಭವ ಪಡೆಯುವ ಉದ್ದೇಶದಿಂದ ಪಣಂಬೂರು ಪೊಲೀಸ್ ಠಾಣೆಗೆ ಶೈಕ್ಷಣಿಕ ಭೇಟಿ ನೀಡಿದರು.
ಈ ಸಂದರ್ಭ ಕಾನೂನು ಸುವ್ಯವಸ್ಥೆ, ಪೊಲೀಸ್ ಇಲಾಖೆ ನಡೆಸುವ ಕಾರ್ಯಗಳು, ನಾಗರಿಕರ ಹಕ್ಕುಗಳು ಹಾಗೂ ಕಾನೂನು ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳೊಂದಿಗೆ ಮಾಹಿತಿ ನೀಡಲಾಯಿತು.
ಎಫ್ಐಆರ್ ದಾಖಲಿಸುವ ವಿಧಾನ, ದೂರು ದಾಖಲಿಸುವ ಪ್ರಕ್ರಿಯೆ, ಅದರ ಪ್ರಾಮುಖ್ಯತೆ ಹಾಗೂ ಕಾನೂನು ತಂತ್ರಜ್ಞಾನ, ಪೊಕ್ಸೊ ಕಾಯ್ದೆ, ಮಕ್ಕಳ ಭದ್ರತೆ ಮತ್ತು ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು, ಡ್ರಗ್ಸ್ ಜಾಲ ಮತ್ತು ಅಪಾಯಗಳು, ಮಾದಕ ವಸ್ತುಗಳ ದುಷ್ಪರಿಣಾಮಗಳು ಮತ್ತು ಕಾನೂನು ಬಾಹಿರ ಕ್ರಿಯಾಕಲಾಪಗಳು, ಸೈಬರ್ ಅಪರಾಧಗಳು, ಡಿಜಿಟಲ್ ಜಗತ್ತಿನ ಅಪಾಯಗಳು, ಸಾಮಾಜಿಕ ಮಾಧ್ಯಮದ ಸೂಕ್ತ ಬಳಕೆ ಹಾಗೂ ಹ್ಯಾಕಿಂಗ್, ಆನ್ಲೈನ್ ಮೋಸಗಳ ವಿರುದ್ಧ ಜಾಗೃತಿ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಮಹಿಳಾ ಸ್ವಾತಂತ್ರ್ಯ ಮತ್ತು ರಕ್ಷಣೆಗಾಗಿ ಕಾನೂನಿನ ಸಹಾಯ, ತುರ್ತು ಸಂಪರ್ಕ ಸಂಖ್ಯೆಗಳ ಬಳಕೆ, ಕಾನೂನು ಜಾರಿಗೊಳಿಸುವಲ್ಲಿ ಪೊಲೀಸರ ಪಾತ್ರ, ಅವರ ತುರ್ತು ಪ್ರತಿಕ್ರಿಯೆಗಳ ಪ್ರಕ್ರಿಯೆ ಮತ್ತು ಕರ್ತವ್ಯ ಇತ್ಯಾದಿಯ ಬಗ್ಗೆ ವಿದ್ಯಾರ್ಥಿಗಳಿಗೆ ನೇರ ಅರಿವು ಮೂಡಿಸಲಾಯಿತು.
ಈ ಸಂದರ್ಭ ಪಣಂಬೂರು ಠಾಣೆಯ ಇನ್ಸ್ಪೆಕ್ಟರ್ ಸಲೀಮ್ ಅಬ್ಬಾಸ್ ವಳಾಲ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕಾನೂನಿನ ಪ್ರಾಮುಖ್ಯತೆಯನ್ನು ವಿವರಿಸಿದರು. ಪೋಲಿಸರು ನಿಮ್ಮ ಮಿತ್ರರು. ಅವರು ನಿಮ್ಮ ರಕ್ಷಣೆಗಾಗಿ ಇರುವವರು. ನಮ್ಮ ನಿತ್ಯ ಜೀವನದಲ್ಲಿ ಕಾನೂನಿನ ಅರಿವು ಮತ್ತು ಜಾಗೃತಿ ಅತ್ಯಗತ್ಯ. ವಿದ್ಯಾರ್ಥಿ-ಯುವಕರು ಕಾನೂನು ಬಗ್ಗೆ ಮಾಹಿತಿ ಹೊಂದಿದರೆ, ಅವರು ಸಮಾಜದ ಪ್ರಗತಿಯೊಂದಿಗೆ ಸುಸಂಘಟಿತ ಜೀವನವನ್ನು ನಡೆಸಬಹುದು. ಡ್ರಗ್ಸ್, ಸೈಬರ್ ಅಪರಾಧಗಳು ಮತ್ತು ಮಹಿಳಾ ಸುರಕ್ಷತೆ ಈ ದಿನಗಳಲ್ಲಿ ಮುಖ್ಯ ವಿಷಯಗಳಾಗಿದ್ದು, ಅವುಗಳ ಬಗ್ಗೆ ಜಾಗೃತಿಯಿಲ್ಲದಿದ್ದರೆ ಅಪಾಯಗಳು ಎದುರಾಗಬಹುದು. ಕಾನೂನು ನಮ್ಮ ರಕ್ಷಣೆಗೆ, ಆದರೆ ಅದನ್ನು ಸರಿಯಾಗಿ ಅರ್ಥೈಸಿ ಅನುಸರಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಶಾಲೆಯ ಸಂಚಾಲಕ ಶೌಕತ್ ಅಲಿ, ಶಾಲೆಯ ಮುಖ್ಯ ಶಿಕ್ಷಕಿ ಸಕೀನಾ ಮತ್ತಿತರರು ಉಪಸ್ಥಿತರಿದ್ದರು.







