ಜ.4ರಂದು ವೇದವರ್ಧನ ತೀರ್ಥರ ಪುರ ಪ್ರವೇಶ

ಮಂಗಳೂರು, ಜ.2: ಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಉಡುಪಿಯ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರು ಜ.4ರಂದು ಸಂಜೆ 4 ಗಂಟೆಗೆ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮಂಗಳೂರಿಗೆ ಪುರ ಪ್ರವೇಶ ಮಾಡಲಿರುವರು.
ಈ ಸಂದರ್ಭದಲ್ಲಿ ಪರ್ಯಾಯದ ಮಂಗಳೂರು ಸ್ವಾಗತ ಸಮಿತಿಯ ವತಿಯಿಂದ ಹಾಗೂ ಭಕ್ತ ಸಮೂಹದಿಂದ ಉರ್ವಸ್ಟೋರ್ ಶ್ರೀ ಮಹಾ ಗಣಪತಿ ದೇವಸ್ಥಾನದ ಆವರಣದಲ್ಲಿ ಶೀರೂರು ಶ್ರೀ ಅವರನ್ನು ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಗುವುದು ಎಂದು ಉಡುಪಿ ಶೀರೂರು ಪರ್ಯಾಯ -2026 ಸ್ವಾಗತ ಸಮಿತಿ ಮಂಗಳೂರು ಗೌರವಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ. 4ರಿಂದ 8ತನಕ ಶೀರೂರು ಶ್ರೀ ಮಂಗಳೂರಿನ ಭಕ್ತಾದಿಗಳ ಮನೆಗೆ ಭೇಟಿ ಮತ್ತು ಹಲವಾರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರ್ಯಾಯ ರಾಯಸವನ್ನು ಭಕ್ತಾದಿಗಳಿಗೆ ನೀಡಲಿದ್ದಾರೆ ಎಂದರು.
ಸಮಿತಿ ಕಾರ್ಯಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಜ.8ರಂದು ಸಂಜೆ 4 ಗಂಟೆಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಭವ್ಯವಾದ ಮೆರವಣಿಗೆ ಮೂಲಕ ಆಗಮಿಸಿ, ಕೊಡಿಯಾಲ್ಬೈಲ್ ಶಾರದಾ ವಿದ್ಯಾಲಯದ ಹೊರಾಂಗಣದಲ್ಲಿರುವ ವೇದಿಕೆಯಲ್ಲಿ ಮಂಗಳೂರಿನ ಜನತೆಯ ಪರವಾಗಿ ಭಾವೀ ಪರ್ಯಾಯ ಶ್ರೀಪಾದರು ಪೌರ ಸನ್ಮಾನ ಸ್ವೀಕರಿಸಲಿರುವರು. ಶೀರೂರು ಶ್ರೀಪಾದರ ನಗರ ಸಂಚಾರ ಸಂದರ್ಭದಲ್ಲಿ ಪಾದಪೂಜೆ ಹಾಗೂ ಗುರುವಂದನೆ ಸಲ್ಲಿಸಲು ಇಚ್ಛಿಸುವ ಭಕ್ತರು ಪರ್ಯಾಯದ ಮಂಗಳೂರು ಸ್ವಾಗತ ಸಮಿತಿಯ ಕಾರ್ಯದರ್ಶಿ ಸುಧಾಕರ್ ರಾವ್ ಪೇಜಾವರ (ಮೊ: 9448546051)ಅಥವಾ ಸಂಚಾಲಕ ಗುರುಪ್ರಸಾದ್ ಕಡಂಬಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು. ಜ.15ರಂದು ಮಂಗಳೂರಿನಿಂದ ಉಡುಪಿ ಪರ್ಯಾಯಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಪ್ರಧಾನ ಸಂಚಾಲಕ ಗುರುಪ್ರಸಾದ್ ಕಡಂಬಾರ್, ಕೋಶಾಧಿಕಾರಿ ಬಿ. ಸುಬ್ರಹ್ಮಣ್ಯ ರಾವ್, ಉಪಾಧ್ಯಕ್ಷ ಎಂ. ರವೀಂದ್ರ ಶೇಟ್ ಉಪಸ್ಥಿತರಿದ್ದರು.







