ರೈತರ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗೆ ರೈತ ಮೇಳ, ಸಸ್ಯೋತ್ಸವ ಪೂರಕ :ದರ್ಶನ್ ಎಚ್.ವಿ.

ಮಂಗಳೂರು : ರೈತರ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗೆ ರೈತ ಮೇಳ, ಸಸ್ಯೋತ್ಸವ ಪೂರಕವಾಗುತ್ತವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ಅವರು ಶುಕ್ರವಾರ ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ತೋಟಗಾರಿಕಾ ಇಲಾಖೆ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ, ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಸಹಕಾರದಿಂದ ಕದ್ರಿ ಉದ್ಯಾನವನ ದಲ್ಲಿ ಅ.17ರಿಂದ 19 ವರೆಗೆ ಹಮ್ಮಿಕೊಂಡ "ಕದ್ರಿ ಸಸ್ಯೋತ್ಸವ -ರೈತ ಮೇಳ"ವನ್ನು ಉದ್ಘಾಟಿಸಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಈ ರೀತಿಯ ರೈತ ಮೇಳಗಳು ನಡೆದಾಗ ಅವರು ಬೆಳೆದ ಉತ್ಪನ್ನ ತಯಾರಿಸಿದ ಆಹಾರ ಪದಾರ್ಥಗ ಳನ್ನು ಮಾರಾಟ ಮಾಡಲು ಒಂದು ವೇದಿಕೆ ಯನ್ನು ಕಲ್ಪಿಸಿದಂತಾಗುತ್ತದೆ. ಇದರಿಂದ ರೈತರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ರೈತರ ಸ್ವಾವಲಂಬಿ ಬದುಕಿಗೆ ಸಹಕಾರ ನೀಡಿದಂತಾಗುತ್ತದೆ. ಯಾವುದೇ ಪ್ರಮಾಣದಲ್ಲಿ ಈ ರೀತಿಯ ರೈತ ಮೇಳಗಳು ನಡೆದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ಶುಭ ಹಾರೈಸಿದರು.
ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕಾರ್ಭಾರಿ ಅವರು ಸುರಂಗ ತೋಡಿ ಕೃಷಿಯಲ್ಲಿ ಸ್ವಾವಬನೆ ಸಾಧಿಸಿದ ರೈತ ಜಾನ್ ಮೊಂತೆರೋ ಅವರನ್ನುರೈತ ಕುಡ್ಲ ಗೌರವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ರೈತ ಕುಡ್ಲ ಗೌರವ ಪಡೆದ ರೈತ ಜಾನ್ ಮೊಂತೇರೋ :
ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವ ನಿವಾಸಿ, ಕಾಯಕವನ್ನೇ ಉಸಿರಾಗಿಸಿಕೊಂಡ ಕರ್ಮಯೋಗಿ, ಬೇಸಾಯ ಹಾಗೂ ಮನೆಯ ಖರ್ಚಿಗಾಗಿ ನೀರಿನ ಸಮಸ್ಯೆ ಎದುರಾದಾಗ ಸುರಂಗಗಳನ್ನು ಕೊರೆದು ಜಲ ಸಂಗ್ರಹಿಸಿದ ಸಾಧಕ. ಭತ್ತ, ಅಡಕೆ, ತರಕಾರಿ ಬೆಳೆಯುತ್ತಿರುವ 71 ವರ್ಷದ ಕಾಯಕಯೋಗಿ ಜಾನ್ ಮೊಂತೆರೋ ರವರಿಗೆ ದಕ್ಷಿಣ ಕನ್ನಡ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ರೈತ ಕುಡ್ಲ ಗೌರವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಭಿನ್ನ ಸಾಮರ್ಥ್ಯ ದ ಮಕ್ಕಳು ತಯಾರಿಸಿದ ಹಣತೆಯನ್ನು ಸ್ಟಾಲ್ ಗಳಲ್ಲಿ ಮಾರಾಟ ಮಾಡಿದರು.
ತೋಟಗಾರಿಕೆ ಇಲಾಖೆಯ ಮಂಜುನಾಥ್, ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ, ವಲಯ ಅರಣ್ಯಾಧಿಕಾರಿ ರಾಜೇಶ್, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಉದ್ಯಮಿ ಸುವರ್ಣ ಸುಂದರ್ , ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಗನ್ನಾಥ ಗಾಂಭೀರ್ , ಜಿ.ಕೆ.ಭಟ್, ರಾಮ ಮೊಗರೋಡಿ ಮೊದಲಾದವರು ಉಪಸ್ಥಿತರಿದ್ದರು .
ರೈತಕುಡ್ಲ ಪ್ರತಿಷ್ಠಾನ ಅಧ್ಯಕ್ಷ ಭರತ್ ರಾಜ್ ಸೊರಕೆ ಸ್ವಾಗತಿಸಿದರು.ಕಾರ್ಯದರ್ಶಿ ಲತೀಶ್ ವಂದಿಸಿದರು. ಸುಧಾ ಪ್ರಹ್ಲಾದ್ ಕಾರ್ಯಕ್ರಮ ನಿರೂಪಿಸಿದರು.
ಸಸ್ಯೋತ್ಸವದಲ್ಲಿ ನರ್ಸರಿ ಸಂಸ್ಥೆಗಳಿಂದ ಹೂವು, ಅಲಂಕಾರಿಕಾ ಸಸ್ಯಗಳ ಪ್ರದರ್ಶನ ಮಾರಾಟ ಇರಲಿದೆ. ತರಕಾರಿ, ಹಣ್ಣಿನ ಗಿಡಗಳು, ಒಳಾಂಗಣ ಸಸ್ಯ, ಕೈತೋಟ ನಿರ್ಮಾಣಕ್ಕೆ ಪೂರಕ ಗೊಬ್ಬರ, ಯಂತ್ರಗಳು, ಬೀಜಗಳು, ತರಕಾರಿ ಗಿಡಗಳು, ಗ್ರೋ ಬ್ಯಾಗ್ ಮಾರಾಟವಿರಲಿದೆ. ಕಸಿ ಕಟ್ಟುವ ಬಗ್ಗೆ ಉಚಿತ ತರಬೇತಿ ಕಲ್ಪಿಸಲಾಗಿತ್ತು.ವಿಶೇಷ ಆಕರ್ಷಣೆಯಾಗಿ ಮಣ್ಣಿನ ಮಡಿಕೆ ತಯಾರಿ, ಹಣತೆ ತಯಾರಿ ಪ್ರಾತ್ಯಕ್ಷಿಕೆ, ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ, ಕೈಮಗ್ಗದಿಂದ ಸೀರೆ ತಯಾರಿ ಪ್ರಾತ್ಯಕ್ಷಿಕೆ ಇರಲಿದೆ. ನಗರ ಜೇನುಕೃಷಿಗೆ ಪೂರಕವಾಗಿ ಜೇನುಕೃಷಿ ಮಾಹಿತಿ, ಸ್ಥಳೀಯ ರೈತೋದ್ಯಮಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ, ಖಾದಿ ಉತ್ಪನ್ನಗಳ ಮಾರಾಟ ಏರ್ಪಡಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಅಗತ್ಯವಾದ ಮಣ್ಣಿನ ಹಣತೆ, ಗೂಡುದೀಪ, ಅಲಂಕಾರಿಕ ವಸ್ತುಗಳ ಮಳಿಗೆಗಳಿವೆ.
ಪಾರ್ಕ್ ನಲ್ಲಿ ಶುಕ್ರವಾರ ಮತ್ತು ಶನಿವಾರ ರಕ್ತದೊತ್ತಡ, ಮಧುಮೇಹ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.







