ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ

ಅಡ್ಯನಡ್ಕ: ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭವು ಶನಿವಾರ ಜನತಾ ಪದವಿಪೂರ್ವ ಕಾಲೇಜಿನ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆನರಾ ಬ್ಯಾಂಕ್ ಮಣಿಪಾಲ ಇದರ ಜನರಲ್ ಮ್ಯಾನೇಜರ್ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿ ಕೆ. ರಾಮ ನಾಯ್ಕ್ ಅವರು, ಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾರ್ಜನೆಗೈದು ಸಮಾಜದಲ್ಲಿ ಮುನ್ನೆಲೆಗೆ ಬಂದರೆ ಅದೇ ನಿಜವಾದ ಕೊಡುಗೆ ಎಂದು ನುಡಿದರು. ತಾವು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ದಿನಗಳನ್ನು ನೆನಪಿಸಿಕೊಂಡು ಸಂಸ್ಥಾಪಕರನ್ನು ಅವರು ಸ್ಮರಿಸಿದರು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನತಾ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಸಾಯ ಕೃಷ್ಣ ಭಟ್ ಹಾಗೂ ವಾರಣಾಶಿ ಸುಬ್ರಾಯ ಭಟ್ ಅವರು ದೂರದರ್ಶಿತ್ವ ಹೊಂದಿದ್ದರು. ಅವರಿಂದ ಸ್ಥಾಪನೆಯಾದ ಈ ವಿದ್ಯಾಸಂಸ್ಥೆ ಇಂದು ಖ್ಯಾತಿ ಪಡೆಯುತ್ತಿರುವುದು ಅಭಿಮಾನದ ವಿಷಯ ಎಂದು ಹೇಳಿದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣ್ಣಮೂರ್ತಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು.
ಜನತಾ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ. ಅತಿಥಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರಾಮ ನಾಯ್ಕ್ ಕೆ ಅವರನ್ನು ಸನ್ಮಾನಿಸಲಾಯಿತು. ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ ಎಂ. ಸನ್ಮಾನ ಪತ್ರ ವಾಚಿಸಿದರು.
ದತ್ತಿನಿಧಿಯ ವರದಿಯನ್ನು ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ವಾಚಿಸಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು, ಆಡಳಿತ ಮಂಡಳಿಯ ಕೋಶಾಧಿಕಾರಿ ಕೇಶವ ಭಟ್ ಚವರ್ಕಾಡು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಮುಳಿಯಾಲ, ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಆರ್. ಎಸ್., ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ., ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರಾದ ದಿ. ವಾರಣಾಶಿ ಸುಬ್ರಾಯ ಭಟ್ ಹಾಗೂ ದಿ. ಸಾಯ ಕೃಷ್ಣ ಭಟ್ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ದತ್ತಿನಿಧಿ ಬಹುಮಾನಗಳು, ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಅಧ್ಯಾಪಕ ವೃಂದದ ಸುಗುಣ ರೈ, ಕುಸುಮಾವತಿ, ಅಪೂರ್ವ, ದಿವ್ಯ, ಮಂಜುಶ್ರೀ, ಗೀತಾಕುಮಾರಿ, ಸದಾನಂದ ರೈ ಅವರು ಬಹುಮಾನ ವಿಜೇತರ ವಿವರ ವಾಚಿಸಿದರು.
ದಿ| ಪಾರ್ವತಿ ಅಮ್ಮ ಹಾಗೂ ಅವರ ಮಗ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಿ| ನಾರಾಯಣ ಜೋಶಿ ಚವರ್ಕಾಡು ಅವರ ಸ್ಮರಣಾರ್ಥ ಅವರ ಪತ್ನಿ ಸರೋಜಾ ನಾರಾಯಣ ಜೋಶಿ ಅವರಿಂದ ಸಿಹಿತಿಂಡಿ ವಿತರಣೆ ನಡೆಯಿತು. ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸ್ಫೂರ್ತಿ ಗೀತೆ ಹಾಡಿದರು. ಜನತಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಶೀನಪ್ಪ ನಾಯ್ಕ್ ಹಾಗೂ ಕನ್ನಡ ಅಧ್ಯಾಪಕ ಶಿವಕುಮಾರ್ ಸಾಯ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಜಯಶ್ರೀ ಕೆ. ಆರ್. ವಂದಿಸಿದರು.







