ಮುಸ್ಲಿಂ ಯುವಕನ ಕೊಲೆಗೆ ಗೃಹ ಇಲಾಖೆಯ ನಿಷ್ಕ್ರಿಯತೆಯೇ ಕಾರಣ: ಬಾಫಖೀ ತಂಙಳ್ ಫೌಂಡೇಶನ್ ಕರ್ನಾಟಕ

ಬಾಫಖೀ ತಂಙಳ್ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ಡಾ.ಶೇಖ್ ಬಾವ ಹಾಜಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳತ್ತಮಜಲು ಪ್ರದೇಶದ ಇಬ್ಬರು ಯುವಕರ ಮೇಲೆ ತಲವಾರು ದಾಳಿ ಮಾಡಿ ಓರ್ವ ಮೃತಪಟ್ಟಿದ್ದು ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಇದಕ್ಕೆ ಗೃಹ ಇಲಾಖೆ ಮತ್ತು ಜಿಲ್ಲಾಡಳಿತವೇ ನೇರ ಹೊಣೆ ಎಂದು ಬಾಫಖೀ ತಂಙಳ್ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ಡಾ.ಶೇಖ್ ಬಾವ ಹಾಜಿ ಮಂಗಳೂರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಅಶಾಂತಿಯನ್ನು ಸೃಷ್ಟಿಸಲು ಹಲವಾರು ದಿನಗಳಿಂದ ಕೆಲವು ಸಮಾಜ ವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಇದನ್ನು ಪೋಲಿಸ್ ಇಲಾಖೆಯು ಅಸಹಾಯಕವಾಗಿ ನೋಡುತ್ತಿದೆ. ಕೋಮು ಅಸಾಮರಸ್ಯಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದೇ ಈ ಘಟನೆಗೆ ನೇರ ಕಾರಣ ಎಂದು ಆರೋಪಿಸಿದ್ದಾರೆ.
ನೀಚ ಮತ್ತು ಪ್ರಚೋದಿತ ಹೇಳಿಕೆಯನ್ನು ನೀಡುವವರನ್ನು ಹಾಗೂ ಅದಕ್ಕೆ ಪ್ರೋತ್ಸಾಹ ನೀಡಿ ಜಿಲ್ಲೆಯ ಅಶಾಂತಿಗೆ ಕಾರಣವಾಗುವವರನ್ನು ಬಂಧಿಸಬೇಕು, ತಕ್ಷಣವೇ ಸರಕಾರ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.