ಜ.3 ರಂದು ಐಎಂಎ - ಎಎಂಸಿ ಕ್ರಿಕೆಟ್: ಜಾವಗಲ್ ಶ್ರೀನಾಥ್ ಉದ್ಘಾಟನೆ

ಮಂಗಳೂರು ಡಿ. 30: ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ಹಾಗೂ ವೈದ್ಯಕೀಯ ತಜ್ಞರ ಸಂಘ ಮಂಗಳೂರು ಶಾಖೆಯ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಐಎಂಎ - ಎಎಂಸಿ ಪ್ರೀಮಿಯರ್ ಲೀಗ್- 2026 ವಾರ್ಷಿಕ ಕ್ರಿಕೆಟ್ ಟೂರ್ನಮೆಂಟ್ ಜ.3ರಂದು ನಗರದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ನಗರದ ವೆನ್ಲಾಕ್ ಆಸ್ಪತ್ರೆಯ ತಜ್ಞರಾದ ದಿ. ಡಾ. ಎಂ. ವಿ. ಶೆಟ್ಟಿ , ದಿ. ಡಾ. ಚೌಡಯ್ಯ ಕ್ರಿಕೆಟ್ ಬಗ್ಗೆ ಅತಿಯಾದ ಆಸಕ್ತಿ ಹೊಂದಿದ್ದು, ಇವರ ಸ್ಮರಣಾರ್ಥ ಈ ಕ್ರಿಕೆಟ್ ಟೂರ್ನಮೆಂಟ್ನ್ನು ಆಯೋಜಿಸಲಾಗುತ್ತದೆ.
ಭಾರತ ಕ್ರಿಕೆಟ್ ತಂಡ ಮಾಜಿ ಬೌಲರ್ ಜಾವಗಲ್ ಶ್ರೀನಾಥ್ ಅವರು ಟೂರ್ನಮೆಂಟ್ನ್ನು ಅಂದು ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್ ಹಾಗೂ ತೇಜಸ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಶಾಂತಾರಾಮ ಶೆಟ್ಟಿ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಅಧ್ಯಕ್ಷ ಡಾ. ಟಿ. ಎ. ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ, ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ, ಕೋಶಾಧಿಕಾರಿ ಡಾ. ಜ್ಯೂಲಿಯನ್ ಸಲ್ಡಾನ ಹಾಗೂ ವೈದ್ಯಕೀಯ ತಜ್ಞರ ಸಂಘದ ಮಂಗಳೂರು ಶಾಖೆ ಅಧ್ಯಕ್ಷ ಡಾ. ಆನಂದ ಬಂಗೇರ, ಕಾರ್ಯದರ್ಶಿ ಡಾ. ಉಲ್ಲಾಸ ಶೆಟ್ಟಿ, ಕೋಶಾಧಿಕಾರಿ ಡಾ. ಗೋವಿಂದರಾಜ್ ಭಟ್ ಉಪಸ್ಥಿತರಿರುವರು.
ಕ್ರಿಕೆಟ್ ಸಂದರ್ಭದಲ್ಲಿ ಮನರಂಜನಾ ಕಾರ್ಯಕ್ರಮದ ಅಂಗವಾಗಿ ಸಂಗೀತ, ಗಾಯನ ಮತ್ತು ಹುಲಿವೇಶ ಕುಣಿತವನ್ನು ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







