ತ್ಯಾಜ್ಯ ಮುಕ್ತ ಸುಸ್ಥಿರ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ದ.ಕ. ಜಿಪಂ ಸಿಇಒ ಸೂಚನೆ

ಮಂಗಳೂರು,ನ.26 : ಗ್ರಾಪಂಗಳು ಸಮುದಾಯದ ಸಹಭಾಗಿತ್ವದಲ್ಲಿ ತ್ಯಾಜ್ಯ ಮುಕ್ತ ಸುಸ್ಥಿರ ಸ್ವಚ್ಛ ಗ್ರಾಪಂ ನಿರ್ಮಾಣಕ್ಕೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ದ.ಕ. ಜಿಪಂ ಸಿಇಒ ಸೂಚಿಸಿದ್ದಾರೆ.
ಪ್ರಸ್ತುತ 322 ಗ್ರಾಮಗಳು ಒಡಿಎಫ್ ಪ್ಲಸ್ ಮಾದರಿ ಗ್ರಾಮಗಳಾಗಿ ಘೋಷಣೆಯಾಗಿದ್ದರೂ ಕೂಡ ರಸ್ತೆ ಬದಿಯ ಚರಂಡಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಸುಡುವುದು ಮತ್ತು ತ್ಯಾಜ್ಯಗಳನ್ನು ಎಸೆದು ರಾಶಿ ಹಾಕುವುದು ಕಂಡುಬರುತ್ತಿದೆ. ಸ್ವಚ್ಛತೆ ಸಾರ್ವಜನಿಕರ ಹೊಣೆಗಾರಿಕೆ ಆಗಿರುವಂತೆಯೇ ಜನರಲ್ಲಿ ಜಾಗೃತಿ ಮೂಡಿಸಿ ಸ್ವಚ್ಛತೆ ಕಾಪಾಡಲು ಗುಣಮಟ್ಟದ ಸೇವೆ ಕಲ್ಪಿಸುವುದು ಗ್ರಾಪಂ ಆಡಳಿತದ ಕರ್ತವ್ಯವೂ ಆಗಿದೆ. ಗ್ರಾಮದಲ್ಲಿರುವ ಎಲ್ಲಾ ಮನೆಗಳು ವೈಯುಕ್ತಿಕ ಕ್ರಿಯಾತ್ಮಕ ಶೌಚಾಲಯಗಳನ್ನು ಹೊಂದಿರಬೇಕು. ಎಲ್ಲಾ ಅಂಗನವಾಡಿ, ಶಾಲೆಗಳು, ಗ್ರಾಪಂ ಕಟ್ಟಡಗಳಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಕ್ರಿಯಾತ್ಮಕ ಶೌಚಾಲಯಗಳಿರಬೇಕು. ಗ್ರಾಮದಲ್ಲಿರುವ ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಹೊಂದಿರಬೇಕು. ಗ್ರಾಮ ವ್ಯಾಪ್ತಿಯ ತೆರೆದ ಪ್ರದೇಶದಲ್ಲಿ ಕಲುಷಿತ ನೀರು ನಿಂತಿರಬಾರದು ಹಾಗೂ ಕಸದ ರಾಶಿ ಹೊಂದಿರಬಾರದು. ಮಾದರಿ ಒಡಿಎಫ್ ಗ್ರಾಮ ಎಂದು ಘೋಷಣೆಯಾಗಿರುವ ಬಗ್ಗೆ, ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂದೇಶಗಳಾದ ಚಿತ್ರಗಳು, ಗೋಡೆ ಬರಹಗಳ ಮೂಲಕ ತಿಳಿಸಬೇಕು ಎಂದು ತಿಳಿಸಿದ್ದಾರೆ.
ಬಾಕಿ ಇರುವ ಗ್ರಾಮಗಳನ್ನು ಒಡಿಎಫ್ ಪ್ಲಸ್ ಮಾದರಿಯನ್ನಾಗಿ ಮಾಡಲು ಅಗತ್ಯ ಕ್ರಮವಹಿಸಬೇಕು. ಪರಿಸರ ಸ್ನೇಹಿ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ನಿರಂತರ ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳನ್ನು ನಡೆಸಿ, ತೆರೆದ ಪ್ರದೇಶದಲ್ಲಿ ಕಸ ಬೀಳದಂತೆ ಹಾಗೂ ಕಲುಷಿತ ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದು ಸೂಚಿಸಿದ್ದಾರೆ.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಎಲ್ಲಾ ಗ್ರಾಮಗಳಲ್ಲಿ ಮಾಲಿನ್ಯವನ್ನು ತಡೆಗಟ್ಟಲು ಪ್ರಾಸ್ಟಿಕ್ ಮತ್ತಿತರ ಘನ ತ್ಯಾಜ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಗ್ರಾಪಂ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳು :
1. ಗ್ರಾಪಂಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ನೈರ್ಮಲ್ಯ, ಸಲಹಾ ಸಮಿತಿ ಮತ್ತು ಸ್ವಚ್ಛತಾ ಕಾರ್ಯಪಡೆಗಳನ್ನು ಕ್ರಿಯಾಶೀಲಗೊಳಿಸಬೇಕು.
2. ಸ್ವಚ್ಛ ಭಾರತ ಅಭಿಯಾನದ ಆಶಯದಂತೆ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಸ್ವಚ್ಛ ಸಂಕೀರ್ಣ ಘಟಕಗಳನ್ನು ಸಮುದಾಯ ಆಧಾರಿತವಾಗಿ ಸಮರ್ಪಕವಾಗಿ ನಿರ್ವಹಿಸಬೇಕು.
3. ಗ್ರಾಪಂ ಸದಸ್ಯರು, ಗ್ರಾಮ ಮಟ್ಟದ ಅಧಿಕಾರಿಗಳು, ಶಾಲಾ ಅಭಿವೃದ್ಧಿ ಸಮಿತಿ, ಬಾಲವಿಕಾಸ ಸಮಿತಿ, ಗ್ರಾಮ ನೈರ್ಮಲ್ಯ ಸಮಿತಿ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಸಂಜೀನಿ ಒಕ್ಕೂಟದ ಸದಸ್ಯರು ಮತ್ತು ಸಖಿಯರು, ಸಂಘ ಸಂಸ್ಥೆಗಳ ಸದಸ್ಯರನ್ನು ಒಳಗೊಂಡ ವಾರ್ಡ್ ಮಟ್ಟದ ಕಾರ್ಯಪಡೆಗಳನ್ನು ರಚಿಸಿ ಕಾರ್ಯಾಚರಿಸಬೇಕು.
4. ಗ್ರಾಪಂ ಕಚೇರಿ, ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಗ್ರಾಮಗಳಲ್ಲಿರುವ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸ್ವಚ್ಛತೆಯನ್ನು ಕಡ್ಡಾಯವಾಗಿ ಕಾಪಾಡಿಕೊಂಡಿರುವ ಕುರಿತು ಖಾತರಿ ಪಡಿಸಬೇಕು.
5. ಕಾರ್ಯಪಡೆಯ ಸದಸ್ಯರು ತಂಡಗಳಾಗಿ ಎಲ್ಲಾ ಮನೆಗಳು, ವಾಣಿಜ್ಯ ಅಂಗಡಿಗಳಿಗೆ ತೆರಳಿ ಜಾಗೃತಿ ಮೂಡಿಸಬೇಕು. ಕಸದ ಅಸಮರ್ಪಕ ನಿರ್ವಹಣೆಯಿಂದಾಗುವ ಅಪಾಯ ಮತ್ತು ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಸರಳ ಉಪಾಯಗಳ ಬಗ್ಗೆ ತಿಳಿಸಿಕೊಡಬೇಕು.
6. ಹಸಿ, ಒಣ, ಅಪಾಯಕಾರಿ ಕಸಗಳ ಸಮರ್ಪಕ ವಿಂಗಡಣೆ ಮತ್ತು ನಿರ್ವಹಣೆಯನ್ನು ಖಾತರಿ ಪಡಿಸಿದ ಮನೆಗಳು, ವಾಣಿಜ್ಯ ಅಂಗಡಿಗಳು ಹಾಗೂ ಸಂಸ್ಥೆಗಳಿಂದ ನಿಗದಿಪಡಿಸಿದ ನವೂನೆಯಲ್ಲಿ ಸ್ವಚ್ಛತಾ ಸ್ವಯಂ ಘೋಷಣಾ ಪತ್ರಗಳನ್ನು ಸ್ವೀಕರಿಸಬೇಕು.
7. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ/ಬಳಕೆ ಮಾಡದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು.
8. ಸ್ವಚ್ಛ ಮನೆ ಸ್ವಯಂ ಘೋಷಣಾ ಪತ್ರ ಸಲ್ಲಿಸಿ. ಸ್ವಚ್ಛತಾ ಸಂಸ್ಕೃತಿಯನ್ನು ಅಳವಡಿಸಿಕೊಂಡ ಕುಟುಂಬಗಳ ಸಮಾವೇಶದೊಂದಿಗೆ ’ಗ್ರಾಮ ಸ್ವಚ್ಛತಾ ಸಂಭ್ರಮ’ ಕಾರ್ಯಕ್ರಮವನ್ನು ಏರ್ಪಡಿಸಬೇಕು ಹಾಗೂ ’ಬಯಲು ಕಸ ಮುಕ್ತ ಗ್ರಾಮ’ ಎಂದು ಘೋಷಿಸಬೇಕು.







