ಜಪ್ಪಿನಮೊಗರು ಕೃತಕ ನೆರೆಗೆ ಅಸಮರ್ಪಕ ತಡೆಗೋಡೆ ಕಾರಣ: ಕಾಂಗ್ರೆಸ್ ವಾರ್ಡ್ ಸಮಿತಿ ಆರೋಪ

ಮಂಗಳೂರು, ಜೂ.18: ಜಪ್ಪಿನಮೊಗರು ಪ್ರದೇಶದ ನಾಗಲ್ಲು ಉರುಂಡೆತೋಟ ಪ್ರದೇಶದಲ್ಲಿ ವಿಪರೀತ ಮಳೆಯಿಂದ ರಾಜಕಾಲುವೆ ತಡೆಗೋಡೆ ಕೊಚ್ಚಿ ಹೋಗಿ ತೋಚಿಲ, ನಾಗಲ್ಲು ಗಣೇಶಪುರ, ಹೊಯ್ಗೆ ರಾಶಿ, ವೈದ್ಯನಾಥನಗರ, ಬಜೆಹಿತ್ತಲು, ಅಂಗಡಿಮಾರು ಪ್ರದೇಶಗಳಲ್ಲಿ ಕೃತಕ ನೆರೆಗೆ ಕಾರಣವಾಗಿದೆ ಎಂದು ಜಪ್ಪಿನಮೊಗರು ಕಾಂಗ್ರೆಸ್ ವಾರ್ಡ್ ಸಮಿತಿ ಆರೋಪಿಸಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಸುಧಾಕರ್ ಜೆ., ರಾಜಕಾಲುವೆಯ ಒಂದು ಬದಿಯಲ್ಲಿ ಅಸಮರ್ಪಕ ತಡೆಗೋಡೆ ನಿರ್ಮಾಣದಿಂದ ಈ ಪರಿಸ್ಥಿತಿಗೆ ಕಾರಣವಾಗಿದೆ. ಆದರೆ, ಜಪ್ಪಿನಮೊಗರು ಸುತ್ತಮುತ್ತ ಕೃತಕ ನೆರೆಯಿಂದ ಸಂಭವಿಸಿದ ಅಪಾರ ಪ್ರಮಾಣದ ಸೊತ್ತು ಹಾನಿಯ ಬಗ್ಗೆ ಸ್ಥಳೀಯ ಶಾಸಕರು ಹಾಗೂ ನಿಕಟಪೂರ್ವ ಕಾರ್ಪೊರೇಟರ್ ವೀಣಾ ಮಂಗಳ ಜವಾಬ್ಧಾರಿಯಿಂದ ನುಣುಚಿಕೊಳ್ಳುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಸುಮಾರು 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಂಕನಾಡಿ, ಪಂಪ್ವೆಲ್, ಎಕ್ಕೂರು ಮೊದಲಾದ ಪ್ರದೇಶಗಳ ಮೂಲಕ ಹಾದುಹೋಗುವ ರಾಜಕಾಲುವೆ ನಾಗಲ್ಲು ಉರುಂಡೆತೋಟ ಎಂಬಲ್ಲಿ ಸುಮಾರು 25 ಮೀಟರ್ಗಳಷ್ಟು ತಡೆಗೋಡೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದಾಗಿ ಜಪ್ಪಿನಮೊಗರು ಗ್ರಾಮದ ಹಲವಾರು ಪ್ರದೇಶಗಳು ಜಲಾವೃತಗೊಂಡು ಅಲ್ಲಿರುವ ಮನೆ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಬೆಲೆಬಾಳುವ ವಸ್ತುಗಳು ನಷ್ಟವಾಗಿವೆ. ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ನೆರೆ ಪುನರಾವರ್ತನೆಯಾಗಿದೆ. ಕಳೆದ ಆರು ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜಕಾಲುವೆಗೆ ಸಂಪೂರ್ಣ ಕಾಂಕ್ರಿಟೀಕೃತ ತಡೆಗೋಡೆ ನಿರ್ಮಿಸಲು ಕೋಟ್ಯಂತರ ರೂ. ಅನುದಾನ ದೊರಕಿದೆ. ರಾಜಕಾಲುವೆಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣವಾಗಿದ್ದು, ಒಂದು ಬದಿಯ ಅಸಮರ್ಪಕ ತಡೆಗೋಡೆ ಈ ಕೃತಕ ನೆರೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಕಾಶ್ ಕಟ್ಟಪುಣಿ ಎಂಬವರ ಮನೆಯಿಂದ ಸುಮಾರು 75 ಮೀಟರ್ನಷ್ಟು ಉದ್ದಕ್ಕೆ ತಡೆಗೋಡೆ ನಿರ್ಮಿಸದೆ ಹಳೆಯ ಮಣ್ಣಿನ ತಡೆಗೋಡೆ ರಕ್ಷಣೆ ನೀಡಲಾಗಿದೆ. ಈ ಬಗ್ಗೆ ಕಳೆದೆರಡು ವರ್ಷಗಳಿಂದ ಮನಪಾದ ಸ್ಥಳೀಯ ಸದಸ್ಯೆಗೆ ಕರೆ ಮಾಡಿ ತಿಳಿಸಿದ್ದರೂ ಸ್ಪಂದಿಸದ ಕಾರಣ ಕೃತಕ ನೆರೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಮಾರ್ಚ್- ಎಪ್ರಿಲ್ ತಿಂಗಳಲ್ಲಿ ನಡೆಸಬೇಕಾದ ರಾಜಕಾಲುವೆಯ ಹೂಳೆತ್ತುವ ಕಾರ್ಯ ಮೇ ತಿಂಗಳಲ್ಲಿ ನಡೆಸಲಾಗಿದೆ. ತಮ್ಮ ಜವಾಬ್ಧಾರಿಯನ್ನು ಮರೆತು ಇಲ್ಲಿನ ನಿಕಟಪೂರ್ವ ಕಾರ್ಪೊರೇಟರ್ ಹಾಗೂ ಶಾಸಕರು ಬೇರೆ ಪಕ್ಷದ ಕಡೆಗೆ ಕೈ ತೋರಿಸುವ ಮೂಲಕ ತಮ್ಮ ಜವಾಬ್ಧಾರಿಯನ್ನು ಮರೆತಿದ್ದಾರೆ. ಈ ಬಗ್ಗೆ ಅವರು ತಮ್ಮ ಉತ್ತರದಾಯಿತ್ವ ವಹಿಸಿ, ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಿ ಸಮಸ್ಯೆಗೆ ಪರಿಹಾರ ದೊರಕಿಸಲಿ ಎಂದು ಅವರು ಆಗ್ರಹಿಸಿದರು.
ಗೋಷ್ಟಿಯಲ್ಲಿ ಮಾಜಿ ಕಾರ್ಪೊರೇಟರ್ ಜೆ. ನಾಗೇಂದ್ರ ಕುಮಾರ್, ಸ್ಥಳೀಯರಾದ ಹರ್ಬರ್ಟ್ ಡಿಸೋಜಾ, ತಾರನಾಥ ಭಂಡಾರಿ, ಶೇಖರ್ ಸನಿಲ್, ರವಿರಾಜ್ ಕಡೇಕಾರ್, ಪ್ರಶಾಂತ್ ಡಿಸೋಜಾ, ಕೀರ್ತನ್ ಕುಮಾರ್ ಉಪಸ್ಥಿತರಿದ್ದರು.







