ಜೂ.4ರಿಂದ 6: ಜಾಗತಿಕ ಯುವ ಶೃಂಗ ಸಭೆ
ಮಂಗಳೂರು, ಜೂ.3: ಯೆನೆಪೋಯ (ಡೀಮ್ಡ್ ಎಂದು ಪರಿಗಣಿಸಲಾದ ವಿಶ್ವವಿದ್ಯಾಲಯ) ಸಹಯೋಗದೊಂದಿಗೆ ರಾಜ್ಯ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್ಎಸ್ಎಸ್ ಕೋಶ ಜೂ.4ರಿಂದ ಜೂ. 6ರವರೆಗೆ ಜಾಗತಿಕ ಯುವ ಶೃಂಗ ಸಭೆ 2025 ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಲಾಗಿದೆ.
ಕರ್ನಾಟಕವನ್ನು ಜಾಗತಿಕ ಯುವ ತೊಡಗಿಸಿಕೊಳ್ಳುವಿಕೆ ಮತ್ತು ಸನಾಯಕತ್ವದ ಕೇಂದ್ರವಾಗಿಸುವಲ್ಲಿ ದಿಟ್ಟ ಹೆಜ್ಜೆಯಾಗಿ ನಡೆಯಲಿರುವ ಈ ಸಮ್ಮೇಳನಕ್ಕೆ ಜೂ. 4ರಂದು ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡೂರಾವ್ ಯೆನೆಪೋಯದ ಯೆಂಡುರೆನ್ಸ್ ಜೋನ್ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಯೆನೆಪೋಯ ವಿವಿಯ ಡಾ. ನಾಗರಾಜ್ ಮಾಹಿತಿ ನೀಡಿದರು.
ಸಮ್ಮೇಳನದಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಂದೀಪ್ ಡಿ., ಯೆನೆಪೋಯ ವಿವಿಯ ಕುಲಪತಿ ಡಾ.ಎಂ. ವಿಜಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್, ಯೆನೆಪೋಯ ವಿವಿಯ ಸಹ ಉಪ ಕುಲಪತಿ ಡಾ. ಶ್ರೀಪತಿ ರಾವ್, ರಿಜಿಸ್ಟ್ರಾರಂ ಡಾ.ಕೆ.ಎಸ್. ಗಂಗಾಧರ ಸೋಮಯಾಜಿ, ರಾಜ್ಯ ಎನ್ಎಸ್ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶಕ ಉಪಾಧ್ಯಾಯ, ಜಾಗತಿಕ ಯುವ ಶೃಂಗಸಭೆಯ ಸಂಘಟನಾ ಕಾರ್ಯದರ್ಶಿ ಡಾ. ಅಶ್ವಿನಿ ಶೆಟ್ಟಿ ಭಾಗವಹಿಸಲಿದ್ದಾರೆ. ದೇಶದ ವಿವಿಧ ಕಡೆಗಳಿಂದ ಸುಮಾರು 650 ಪ್ರತಿನಿಧಿಗಳು ಭಾಗವಹಿಸಲಿದ್ದು, 15 ದೇಶಗಳ ಯುವ ಪ್ರತಿನಿಧಿಗಳು, ಜಾಗತಿಕ ವಿನಿಯಮಕ್ಕಾಗಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಸಾಮಾಜಿಕ ಉ್ಯಮಶೀಲತೆ ಮತ್ತು ನಾವೀನ್ಯತೆ, ಯುವ ನೀತಿ ಮತ್ತು ವಕಾಲತ್ತು, ಹಸಿರು ಭಾರತ ಮತ್ತು ಪರಿಸರ ಕ್ರಿಯೆ, ಸಾರ್ವಜನಿಕ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಯುವಕರು, ಶಾಂತಿ ನಿರ್ಮಾಣ ಮತ್ತು ಸಂಘರ್ಷ ಪರಿಹಾರದಲ್ಲಿ ಯುವಕರು, ಹವಾಮಾನ ಬದಲಾವಣೆ ಮತ್ತು ಪರಿಸರ ಸಂಕ್ಷಣೆ ಮೊದಲಾದ ವಿಷಯಗಳಲ್ಲಿ ಚರ್ಚೆ ನಡೆಯಲಿದೆ. ‘ಐಡಿಯಾವರ್ಸ್- ನವ ಭಾರತಕ್ಕಾಗಿ ಯುವ ನಾವೀನ್ಯತೆ’ ಎಂಬ ವಿಷಯದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಗೋಷ್ಟಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದ.ಕ. ಜಿಲ್ಲಾ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ, ಯೆನೆಪೋಯ ವಿವಿಯ ಡಾ. ಮುಹಮ್ಮದ್ ಗುತ್ತಿಗಾರು ಉಪಸ್ಥಿತರಿದ್ದರು.







