ಕಡಬ ಪ.ಪಂ ಚುನಾವಣೆ: ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ

ಮಂಗಳೂರು, ಆ.11: ಕಡಬ ಪಟ್ಟಣ ಪಂಚಾಯತ್ಗೆ ಆ.17ರಂದು ಚುನಾವಣೆ ನಡೆಯಲಿದೆ. ಈ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಪರವಾನಿಗೆದಾರರು (ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಅವರ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳನ್ನು ಠೇವಣಿ ಇರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪರವಾನಿಗೆದಾರರಿಗೆ ಬೆಳೆ/ಆತ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಮಾತ್ರ ಸಂಬಂಧಪಟ್ಟವರು, ಪೂರಕ ದಾಖಲೆಗಳೊಂದಿಗೆ ಸಮಿತಿಗಳಿಗೆ ಅಹವಾಲುಗಳನ್ನು ಸಲ್ಲಿಸಬೇಕು. ಸ್ಕ್ರೀನಿಂಗ್ ಸಮಿತಿಯು ಅರ್ಹ ಪ್ರಕರಣಗಳಲ್ಲಿ ಸ್ತ್ರಾಸ್ತ್ರವನ್ನು ಠೇವಣಿ ಇಡುವುದರಿಂದ ವಿನಾಯಿತಿ ನೀಡಲು ಅಧಿಕಾರವನ್ನು ನೀಡಲಾಗಿದೆ. ಅಮಾನತಿನ ಅವಧಿ ಮುಗಿದ ತಕ್ಷಣ ಆಯುಧ ಠೇವಣಿ ಪಡೆದ ಪೊಲೀಸ್ ಅಧಿಕಾರಿಗಳು/ಡೀಲರ್ಗಳು ಅಂತಹ ಆಯುಧಗಳನ್ನು ಠೇವಣಿದಾರರಿಗೆ ಆಗಸ್ಟ್ 30ರ ನಂತರ ಹಿಂತಿರುಗಿಸಬೇಕು.
ಈ ಆದೇಶವು ಸರಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂದಿಗಳಿಗೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಭದ್ರತಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.





