ಕಲ್ಲರಕೋಡಿ: ಶಾಲಾ ದೈಹಿಕ ಶಿಕ್ಷಕನ ಮೃತದೇಹ ಬಾವಿಯಲ್ಲಿ ಪತ್ತೆ

ಉಳ್ಳಾಲ: ನರಿಂಗಾನ ಗ್ರಾಮದ ಕಲ್ಲರಕೋಡಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾಕರ್ ಜೋಗಿ (51) ಎಂಬವರ ಮೃತದೇಹ ಕೋಟೆಕಾರು ಪಟ್ಟಣ ವ್ಯಾಪ್ತಿಯ ಕೊಂಡಾಣದ ತನ್ನ ಮನೆಯ ಬಾವಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದ್ದು, ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಶುಕ್ರವಾರ ಸಂಜೆ ಪ್ರಭಾಕರ್ ತನ್ನ ಮಗಳನ್ನು ಉಚ್ಚಿಲದ ಶಾಲೆಗೆ ಶಾಲಾ ವಾರ್ಷಿಕೋತ್ಸವಕ್ಕೆಂದು ಬಿಟ್ಟು ಮನೆಗೆ ಬಂದಿದ್ದರು. ಬಳಿಕ ಪತ್ನಿ ಮತ್ತು ಮಗನ ಜೊತೆ ಮಗಳ ಶಾಲಾ ವಾರ್ಷಿಕೋತ್ಸವಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ನಂತರ ನಾಪತ್ತೆಯಾಗಿದ್ದರು. ಅವರನ್ನು ಹುಡುಕಾಡಿದಾಗ ಅವರ ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.
ಮೃತ ಪ್ರಭಾಕರ ಜೋಗಿಯವರು ನರ ದೌರ್ಬಲ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಪ್ರಭಾಕರ ಜೋಗಿಯವರು ಉಳ್ಳಾಲ ತಾಲೂಕಿನ ಹಲವು ಶಾಲೆಗಳಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ದೈಹಿಕ ಶಿಕ್ಷಕರ ಸಂಘಟನೆಗಳಲ್ಲಿಯೂ ಅವರು ಸಕ್ರಿಯರಾಗಿದ್ದರು.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ನನ್ನ ತಂದೆ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪ್ರಭಾಕರ್ ಅವರ ಪುತ್ರ ಸಾಯಿ ತೇಜಸ್ ಉಳ್ಳಾಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.







