ಮಂಗಳೂರು ವಿವಿಯಲ್ಲಿ ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮ ಉದ್ಘಾಟನೆ

ಕೊಣಾಜೆ: ಸಂಗೀತ, ಸಾಹಿತ್ಯದ ಮೂಲಕ ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಕನಕದಾಸರ ಕಾವ್ಯ, ಸಾಹಿತ್ಯ ಸಂಗತಿಗಳು ಅತ್ಯಂತ ವಿಸ್ತಾರವಾಗಿದೆ. ಅವರ ಸಾಹಿತ್ಯ, ಕೀರ್ತನೆಗಳ ಜೊತೆ ಜೊತೆಯಾಗಿ ಭಕ್ತಿ, ವೈಚಾರಿಕತೆ, ಭಾವನಾ ತೀವ್ರತೆಯೂ ಇರುವುದನ್ನು ನಾವು ಗಮನಿಸಬಹುದು ಎಂದು ಕಲಾವಿದರು ಮತ್ತು ಸಂಶೋಧಕರಾದ ಡಾ.ಕೆ.ಎಸ್.ಪವಿತ್ರ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಸಂಶೋಧನ ಕೇಂದ್ರ, ಮಂಗಳಗಂಗೋತ್ರಿ ʻಕನಕ ಜಯಂತಿ ಪ್ರಯುಕ್ತʼ ಎಸ್ವಿಪಿ ಸಂಸ್ಥೆಯ ಪ್ರೊ.ವಿವೇಕ್ ರೈ ವಿಚಾರ ವೇದಿಕೆಯಲ್ಲಿ ಬುಧವಾರ ನಡೆದ 2025-2026ನೇ ಸಾಲಿನ ಶೈಕ್ಷಣಿಕ ವರ್ಷದ `ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕನಕದಾಸ ಜೀವನ ಚರಿತ್ರೆಯನ್ನು ನಾವು ಓದಿದರೆ ಅದರಲ್ಲಿ ಅವರ ಪಾಡು ಹಾಡಾಗಿ ಹರಿದಿದೆ ಎಂಬುವುದು ನಮಗೆ ಸ್ಪಷ್ಟವಾಗುತ್ತದೆ. ಅವರ ಕಾವ್ಯ, ಕೀರ್ತನೆಗಳನ್ನು ಹಾಡುವುದರ ಜೊತೆಗೆ ಅದರ ಅರ್ಥ, ವೈಶಿಷ್ಟ್ಯತೆಯನ್ನೂ ಅರ್ಥ ಮಾಡಿಕೊಳ್ಳಬೇಕು. ಕನಕದಾಸರ ಕೀರ್ತನೆ, ಸಾಹಿತ್ಯದ ಶಕ್ತಿ ಹಾಗೂ ಮೌಲ್ಯವನ್ನು ಅರಿತುಕೊಂಡರೆ ನಿಜವಾದ ಕನಕದಾಸರನ್ನು ಕಾಣಲು ಸಾಧ್ಯ. ರಸಾನುಭವವನ್ನು ಸವಿಯಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ ಅವರು, ಕನಕದಾಸರು ಹದಿನೈದನೇ ಶತಮಾನದಲ್ಲಿ ಹುಟ್ಟಿ ಮೌಲ್ಯಗಳ ಬುಟ್ಟಿಯನ್ನೇ ಬಿಟ್ಟು ಹೋಗಿದ್ದಾರೆ. ಅಂದಿನ ಕಾಲದ ಅವರ ಕಾವ್ಯಗಳಲ್ಲಿರುವ ಸಮಾಜಮುಖಿ ಮೌಲ್ಯಗಳು ಇಂದಿನ ಡಿಜೀಟಲೀಕರಣ ಯುಗದಲ್ಲೂ ಪ್ರಸ್ತುತವಾಗಿದೆ. ಅವರ ಸಮಾಜಪರ ಚಿಂತನೆ, ಸಾಮಾಜಿಕ,ಸಾಮರಸ್ಯದ ಅಲೋಚನೆಗಳು ಬಹಳ ಮುಖ್ಯವಾಗಿದೆ ಎಂದರು.
ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನಾಗಪ್ಪ ಗೌಡ, ಆರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಿವರಾಮ ಶೆಟ್ಟಿ, ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಉಪಸ್ಥಿತರಿದ್ದರು.
ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತೋನ್ಸೆ ಪುಷ್ಕಲ್ ಕುಮಾರ್ ಕನಕ ಕೀರ್ತನೆ ಹಾಡಿದರು. ವಿದ್ಯಾರ್ಥಿನಿ ಆಶ್ರಿತ ವಂದಿಸಿದರು. ವಿದ್ಯಾರ್ಥಿ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಪ್ರೌಢಶಾಲೆ, ಪದವಿಪೂರ್ವ, ಸ್ನಾತಕೋತ್ತರ ಪದವಿ, ಅಧ್ಯಾಪಕ ವಿಭಾಗಗಳಲ್ಲಿ ಮತ್ತು ಪದವಿ, ಸಿಬ್ಬಂದಿ, ಸಾರ್ವಜನಿಕ ಮಟ್ಟದಲ್ಲಿ ಕನಕದಾಸರ ಕೀರ್ತನೆಗಳ ʻಸಮೂಹ ಗಾಯನʼ ಕಾರ್ಯಕ್ರಮವು ನಡೆಯಿತು.







