ಕುತ್ಲೂರು| ಅನುಮಾನಾಸ್ಪದ ವ್ಯಕ್ತಿ ಚಾಕು ಹಿಡಿದು ಓಡಾಟ!

ಬೆಳ್ತಂಗಡಿ: ತಾಲೂಕಿನ ಕುತ್ಲೂರು ಗ್ರಾಮದ ಶಾಲೆಯ ಬಳಿ ಅನುಮಾನಾಸ್ಪದ ವ್ಯಕ್ತಿಯೋರ್ವ ಕತ್ತಿ ಹಾಗೂ ಚಾಕು ಹಿಡಿದುಕೊಂಡು ಓಡಾಟ ನಡೆಸಿರುವ ಘಟನೆ ನ. 4ರಂದು ಸಂಜೆಯ ವೇಳೆ ನಡೆದಿದೆ. ಈ ವ್ಯಕ್ತಿ ಆರಂಭದಲ್ಲಿ ಕುತ್ಲೂರು ಪೇಟೆಯ ಸಮೀಪ ಕಾಣಿಸಿಕೊಂಡಿದ್ದು, ಆತನನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿದ್ದಾನೆ. ಆ ವ್ಯಕ್ತಿ ತುಳುವಿನಲ್ಲಿ ಮಾತನಾಡಿದ್ದು, ತಾನು ರಬ್ಬರ್ ಟ್ಯಾಪಿಂಗ್ ಗೆ ಬಂದಿರುವುದಾಗಿ ಹೇಳಿದ್ದಾನೆ. ಬಳಿಕ ಆತನ ಸೊಂಟದಲ್ಲಿ ಕತ್ತಿ ಇರಿಸಿಕೊಂಡಿರುವುದು ನೋಡಿ ಇದನ್ನು ಪ್ರಶ್ನಿಸಿದಾಗ ಆತ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.
ನಂತರ ಆತ ಮನೆಯೊಂದರ ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದಾನೆ. ಇದನ್ನು ನೋಡಿ ಜನರು ಆತಂಕಗೊಂಡಿದ್ದು, ತಕ್ಷಣ ವೇಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅನುಮಾನಾಸ್ಪದ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಆತ ಸೊಂಟದಲ್ಲಿ ಕತ್ತಿ ಇರಿಸಿಕೊಂಡಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ.
ಕುತ್ಲೂರಿನ ಆಸುಪಾಸಿನ ಜನರನ್ನು ಎಚ್ಚರಿಕೆಯಿಂದ ಇರಲು ಪೊಲೀಸರು ಮನವಿ ಮಾಡಿದ್ದಾರೆ. ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ತಿಳಿಸಿದ್ದಾರೆ.







