ಕೊಣಾಜೆ | ಬೆಳ್ಮ ಸೇವಾಶ್ರಮದಲ್ಲಿ ಕಸಾಪ ರಾಜ್ಯೋತ್ಸವ

ಕೊಣಾಜೆ: ನಮ್ಮ ಭಾಷೆ, ದೇಶ ಹಾಗೂ ಹಿರಿಯರನ್ನು ಗೌರವಿಸುವುದೇ ಸಂಸ್ಕೃತಿ. ಕನ್ನಡ ಮತ್ತು ಕನಕದಾಸರಂತಹ ಮಹಾತ್ಮರನ್ನು ನೆನೆಯುವುದರಿಂದ ನಮಗೆ ಒಳಿತಾಗುವುದು ಎಂದು ದೇರಳಕಟ್ಟೆ ವಿದ್ಯಾರತ್ನ ವಿದ್ಯಾಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಅವರು ಸೋಮವಾರ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ ಕೊಲ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ, ಕನಕದಾಸ ಪೀಠ ಮಂಗಳೂರು ವಿವಿ ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆ ಬೆಳ್ಮ ಸೇವಾಶ್ರಮ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ನಮಗೆ ಭಾಷೆ, ನೆಲ, ಸಂಸ್ಕೃತಿಯಷ್ಟೇ ಅಲ್ಲ ಅದು ನಮಗೆ ಬದುಕು ಕೊಟ್ಟಿದೆ. ಬಸವಣ್ಣ, ಕನಕದಾಸರಂತಹ ಅನೇಕ ಸಂತರು ಬಾಳಿದ ಕನ್ನಡನಾಡು ಅನೇಕ ಮೌಲ್ಯ ಆದರ್ಶಗಳ ತವರೂರು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ ಜಿಲ್ಲಾ ಕಸಾಪ ಉಳ್ಳಾಲ ಘಟಕ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹರಿಕಥಾ ಪರಿಷತ್ ಅಧ್ಯಕ್ಷರಾದ ಕೆ ಮಹಾಬಲ ಶೆಟ್ಟಿ ಮಾತನಾಡಿ, ಭಕ್ತಿ ಬದುಕಿನ ನಿಜವಾದ ಶಕ್ತಿ ಎಂದರು.
ಸಮಾರಂಭದಲ್ಲಿ ದ.ಕ ಜಿಲ್ಲಾ ಕಸಾಪ ಉಳ್ಳಾಲ ಘಟಕದ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಕಾರ್ಯಕ್ರಮ ಸಂಯೋಜಕ ತೋನ್ಸೆ ಪುಷ್ಕಳ ಕುಮಾರ್, ಸೇವಾಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಜಿ.ಆರ್ ಶೆಟ್ಟಿ, ಕವಿ ಗುಣಾಜೆ ರಾಮಚಂದ್ರ ಭಟ್ , ಮಂಗಳೂರು ವಿವಿ ತುಳುಪೀಠದ ಪ್ರಸಾದ್ ಅಂಚನ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕನಕದಾಸ ಪ್ರಶಸ್ತಿ ಪುರಸ್ಕೃತರಾದ ತೋನ್ಸೆ ಪುಷ್ಕಳ ಕುಮಾರ್ ಇವರನ್ನು ಗೌರವಿಸಲಾಯಿತು. ಬಳಿಕ ಅವರಿಂದ ಭಕ್ತ ಕನಕದಾಸ ಎಂಬ ಹರಿಕಥೆ ನಡೆಯಿತು. ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಹಾಗೂ ಕೌಶಿಕ್ ಮಂಜನಾಡಿ ಸಹಕರಿಸಿದರು.







