ಕೊಣಾಜೆ | ಭಾಷೆ ಬೆಳೆದರೆ ಸಂಸ್ಕೃತಿ ಉಳಿಯುತ್ತದೆ : ಡಾ.ಸುಧೀರ್ ರಾಜ್. ಕೆ.

ಕೊಣಾಜೆ: ಭಾಷೆಯು ಸದ್ಗುಣಗಳ ಸಿಂಚನವಾಗಿದೆ. ಭಾಷೆ ಬೆಳೆದರೆ ಸಂಸ್ಕೃತಿಯೂ ಉಳಿಯುತ್ತದೆ. ಸಂಸ್ಕೃತಿ ಉಳಿದರೆ ದೇಶವೇ ಉಳಿಯುತ್ತದೆ. ಭಾಷೆಯು ಹೃದಯಗಳ ಮಿಲನವಾಗಿದೆ ಎಂದು ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರದ ನಿರ್ದೇಶಕರಾದ ಡಾ.ಸುಧೀರ್ ರಾಜ್ ಕೆ. ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರ,ಎನ್ಎಸ್ಎಸ್ ಘಟಕ,ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರ ಸಹಯೋಗದಲ್ಲಿ ಗುರುವಾರದಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಕೆ.ಎಸ್.ಹೆಗ್ಡೆ ಆಡಿಟೋರಿಯಮ್ ನಲ್ಲಿ ನಡೆದ ಭಾರತೀಯ ಭಾಷಾ ದಿನಾಚರಣೆ ಕಾರ್ಯಕ್ರಮವನ್ನುದ್ಧೇಶಿಸಿ ಅವರು ಮಾತನಾಡಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಮಾತನಾಡಿ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆಯ ಅಗತ್ಯವಿದೆ. ಭಾಷಾ ದಿನದ ಮುಖ್ಯ ಉದ್ದೇಶ ನಮ್ಮ ಭಾಷೆಗಳನ್ನು ಪ್ರೀತಿಸಿ ಸಂಭ್ರಮಿಸುವುದು ಮತ್ತು ಇತರ ಬಾಷೆಗಳನ್ನು ಗೌರವಿಸುವುದಾಗಿದೆ. ಭಾಷೆಯ ಮೇಲೆ ಅಭಿಮಾನ ಇರಬೇಕೇ ಹೊರತು ದುರಭಿಮಾನ ಇರಬಾರದೆಂದರು.
ಭಾರತೀಯ ಭಾಷಾ ದಿನದ ಪ್ರಯುಕ್ತ ಜರಗಿದ ವಿವಿಧ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಬಿ.ಸಂದೀಪ್ ರೈ, ಎನ್ಎಸ್ಎಸ್ ಸಂಯೋಜಕರಾದ ಶಶಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ಡಾ.ಸಾಯಿಗೀತ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೇಯಾ ಮತ್ತು ಶರತ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಲಯಾಳಂ ಭಾಷೆಯ ಅರ್ಥಗಾರಿಕೆಯೊಂದಿಗೆ, ತುಳು ಭಾಷೆಯ ಭಾಗವತಿಕೆಯುಳ್ಳ ಮಹಿಷವಧೆ ಯಕ್ಷಗಾನ ಪ್ರದರ್ಶನ ನಡೆಯಿತು.







