ಮಂಗಳೂರು | ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ʼಶಿಕ್ಷಕರಿಗೆ ತರಬೇತಿ ಕಾರ್ಯಾಗಾರʼ

ಮಂಗಳೂರು: ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯಲ್ಲಿ “21 ನೇ ಶತಮಾನದ ಬೋಧನಾ ಸಿಬ್ಬಂದಿಗಳ ಗುಣಲಕ್ಷಣಗಳು” ಎಂಬ ವಿಷಯದ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ (FDP) ಹಮ್ಮಿಕೊಳ್ಳಲಾಗಿತ್ತು.
ಎನ್ಎಲ್ಪಿ ತರಬೇತುದಾರ ಅತೀಕ್ ಉರ್ ರಹಮಾನ್ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಿತು. ಅವರು ಇಂದಿನ ಕಾಲಘಟ್ಟದಲ್ಲಿ ಶಿಕ್ಷಕರ ಪಾತ್ರ ಹೇಗೆ ಬದಲಾಗುತ್ತಿದೆ ಎಂಬ ಕುರಿತು ಮಾತನಾಡಿದರು. ಉತ್ತಮ ಶಿಕ್ಷಕರಾಗಲು ಭಾವನಾತ್ಮಕ, ಬೌದ್ಧಿಕ, ದೈಹಿಕ, ಆಧ್ಯಾತ್ಮಿಕ ಹಾಗೂ ಸೃಜನಾತ್ಮಕ ಶಕ್ತಿಗಳು ಅಗತ್ಯ. ಇಂತಹ ಸಾಮರ್ಥ್ಯವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರು ಕಾರ್ಯಾಗಾರದಲ್ಲಿ ಮಾತನಾಡಿ, ಬೋಧನಾ ಕೌಶಲ್ಯದಲ್ಲಿ ಸುಧಾರಣೆ ತಂದುಕೊಳ್ಳುವಲ್ಲಿ ತರಬೇತಿ ಕಾರ್ಯಾಗಾರಗಳ ಪ್ರಾಮುಖ್ಯತೆಯ ಕುರಿತು ವಿವರಿಸಿದರು.
ಕಾರ್ಯಾಗಾರದಲ್ಲಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಗಳೂರು ಸಂಸ್ಥೆಯ ವಿವಿಧ ವಿಭಾಗಗಳ ಬೋಧನಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಬಿಐಇಎಸ್ ಪ್ರಾಂಶುಪಾಲ ಡಾ.ಅಝೀಝ್ ಮುಸ್ತಫಾ ವಂದಿಸಿದರು.







