ಮಂಗಳೂರು | ಡಿ.20 ರಂದು ಡಾ.ಕೆ.ಚಿನ್ನಪ್ಪ ಗೌಡರ ʼಭೂತಾರಾಧನೆ- ಮಾಯದ ನಡೆ ಜೋಗದ ನುಡಿʼ ಲೋಕಾರ್ಪಣೆ

ಮಂಗಳೂರು: ಕ್ರಿಯೆಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಕ್ರಿಯೆಟಿವ್ ಪುಸ್ತಕ ಮನೆ ಪ್ರಕಾಶನದ ವಿಶೇಷ ಪ್ರಕಟನೆ, ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರ ಸಂಶೋಧನಾ ಕೃತಿ "ಭೂತಾರಾಧನೆ- ಮಾಯದ ನಡೆ ಜೋಗದ ನುಡಿ" ಲೋಕಾರ್ಪಣೆ ಕಾರ್ಯಕ್ರಮವು ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿವಿಯ ಎಲ್ ಎಫ್ ರಸ್ಕಿನ್ಹ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ವಿಶ್ರಾಂತ ಕುಲಪತಿಗಳು, ಜಾನಪದ ವಿದ್ವಾಂಸರಾದ ಪ್ರೊ.ಬಿ.ಎ.ವಿವೇಕ್ ರೈ ಅವರು ಕೃತಿ ಲೋಕಾರ್ಪಣೆಗೊಳಿಸಲಿದ್ದು, ಸಾಹಿತಿ ಡಾ.ರಾಜಶೇಖರ್ ಹಳೆಮನೆ ಕೃತಿಯ ಕುರಿತು ಅವಲೋಕನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ನಾಗಪ್ಪ ಗೌಡ, ಲೇಖಕರು, ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರು ಭಾಗವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ಕ್ರಿಯೆಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ ಅಶ್ವಥ್ ಎಸ್ ಎಲ್ ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದೈವನರ್ತಕರಾದ ಶೇಖರ ಪರವ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಡಾ.ಕೆ.ಚಿನ್ನಪ್ಪ ಗೌಡರ ಸಂಶೋಧನಾ ಕೃತಿ :
ವಿಶ್ರಾಂತ ಕುಲಪತಿಗಳು, ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರ " ಭೂತಾರಾಧನೆ - ಜಾನಪದೀಯ ಅಧ್ಯಯನ " ಗ್ರಂಥವು ಮೂವತ್ತೈದು ವರ್ಷಗಳ ಹಿಂದೆ ಪ್ರಕಟವಾಗಿದ್ದು, ಈ ಗ್ರಂಥದ ವಿಸ್ತೃತ ಆವೃತ್ತಿಯೇ " ಭೂತಾರಾಧನೆ - ಮಾಯದ ನಡೆ ಜೋಗದ ನುಡಿ" ಸಂಪುಟ. ನೂತನ ಆವೃತ್ತಿಯಲ್ಲಿ ಹನ್ನೆರಡು ಅಧ್ಯಾಯಗಳಿವೆ. ಭೂತಾರಾಧನೆಯ ಪರಿವರ್ತನೆಯ ನೆಲೆಗಳು, ಸಾಮಾಜಿಕ ಧ್ವನಿಗಳು, ಸಾಂಸ್ಕೃತಿಕ ಅನನ್ಯತೆ, ಭೂತಾರಾಧನೆಯ ಅಧ್ಯಯನ ವಿಸ್ತಾರಗೊಂಡ ಸೂಕ್ಷ್ಮತೆಯ ಆಯಾಮಗಳು, ಪಾಡ್ದನ ಪಠ್ಯಗಳು ಆರಾಧನೆಯ ರಂಗಪಠ್ಯಗಳಾಗುವ ಪ್ರಕ್ರಿಯೆ ಇವುಗಳಿಗೆ ಸಂಬಂಧಿಸಿದ ಹೊಸ ಅಧ್ಯಾಯಗಳು ಈ ವಿಸ್ತೃತ ಆವೃತ್ತಿಯಲ್ಲಿವೆ. ಕಪ್ಪು ಬಿಳುಪು ಮತ್ತು ವರ್ಣಚಿತ್ರಗಳು, ರೇಖಾಚಿತ್ರಗಳು, ತಖ್ತೆಗಳು, ನಕ್ಷೆಗಳು ಹಾಗೂ ಐದು ದಶಕಗಳ ಹಿಂದಿನ ಭೂತಾರಾಧನೆಯ ಅಧಿಕೃತ ಮಾಹಿತಿಗಳು ಈ ಆವೃತ್ತಿಯ ಸಾಂಸ್ಕೃತಿಕ ಮಹತ್ವವನ್ನು ಹೆಚ್ಚಿಸಿವೆ.







