ಕಂಬಳ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ರಾಜ್ಯದ ಅಸ್ಮಿತೆ: ಬಿ.ವೈ.ವಿಜಯೇಂದ್ರ

ಮಂಗಳೂರು: ಸಂಸದ ಬೃಜೇಶ್ ಚೌಟರ ನೇತೃತ್ವದ 9ನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳವು ಬಂಗ್ರ ಕೂಳೂರು ಗೋಲ್ಡ್ ಪಿಂಚ್ ಸಿಟಿಯಲ್ಲಿ ಶನಿವಾರ ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿದ್ದ ಕಂಬಳವನ್ನು ಸಂಸದ ಕ್ಯಾ.ಬೃಜೇಶ್ ಚೌಟರು ನಗರ ಪ್ರದೇಶಕ್ಕೆ ಪರಿಚಯಿಸಿದ್ದಾರೆ. ಕಂಬಳ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ ಅದು ರಾಜ್ಯದ ಅಸ್ಥಿತೆ ಎಂದು ನುಡಿದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಕ್ಯಾ.ಬೃಜೇಶ್ ಚೌಟ, 'ಬ್ಯಾಕ್ ಟು ಊರು ಪರಿಕಲ್ಪನೆ'ಯು ದೇಶದ ವಿವಿಧ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿ ನೆಲೆಸಿರುವವ ಕರಾವಳಿಗರು ತಾಯ್ನಾಡಿಗೆ ಸಾಮಾಜಿಕ ಕೊಡುಗೆಗಳನ್ನು ನೀಡುವಂತೆ ಪ್ರೇರೇಪಿಸುವ ಕೆಲಸವಾಗಿದೆ ಎಂದು ನುಡಿದರು.
ಮಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಬ್ಯಾಕ್ ಟು ಊರು ಪರಿಕಲ್ಪನೆಯಲ್ಲಿ ಸಾಧನೆಗೈದ ಒಂಭತ್ತು ಉದ್ಯಮಿಗಳನ್ನು ಸನ್ಮಾನಿಸಲಾಯಿತು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಭರತ್ ಶೆಟ್ಟಿ, ರಾಜೇಶ್ ನಾಯ್, ಭಾಗೀರಥಿ ಮುರುಳ್ಯ, ಹರೀಶ್ ಪೂಂಜಾ, ಗುರುರಾಜ್ ಗಂಠಿಹೊಳಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ ಮುಂಬೈ, ಸಂತೋಶ್ ಶೆಟ್ಟಿ ಪುಣೆ, ಕಿಶೋರ್ ಪುತ್ತೂರು ಉಪಸ್ಥಿತರಿದ್ದರು.
ಬೆಳಗ್ಗೆ ಕಂಬಳವನ್ನು ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷರು ಹಾಗೂ ಆಡಳಿತ ಮೊತ್ತೇಸರ ಚಿತ್ತರಂಜನ್ ಉದ್ಘಾಟಿಸಿದರು.







