ಮಂಗಳೂರು | ತುಳುನಾಡಿನ ಅಸ್ಮಿತೆ ದೈವಾರಾಧನೆಯ ನಿಯಮಗಳ ಪಾಲನೆಯಾಗಲಿ: ತಮ್ಮಣ್ಣ ಶೆಟ್ಟಿ

ಮಂಗಳೂರು, ಡಿ.15: ಆಧುನಿಕತೆ, ಪ್ರಚಾರದ ಭರದಲ್ಲಿ ತುಳುನಾಡಿನ ಅಸ್ಮಿತೆಯಾದ ದೈವರಾಧಾನೆಯ ಕಟ್ಟುಕಟ್ಟಳೆಗಳು, ನಿಯಮಗಳನ್ನು ಮೀರಿ ವರ್ತಿಸಲಾಗುತ್ತಿದೆ. ಮೌಖಿಕವಾಗಿ ನಡೆದುಕೊಂಡು ಬಂದಿರುವ ದೈವಾರಾಧನೆಯೆಂಬ ನಂಬಿಕೆಯ ಸತ್ವವನ್ನು ಉಳಿಸುವ ಕೆಲಸ ಮುಂದಿನ ಪೀಳಿಗೆಗೆ ಆಗಬೇಕಾಗಿದೆ ಎಂದು ತಮ್ಮಣ್ಣ ಶೆಟ್ಟಿ ತಿಳಿಸಿದ್ದಾರೆ.
ಬಾರೆಬೈಲ್ ನ ಜಾರಂದಾಯ ಬಂಟ ದೈವಸ್ಥಾನದಲ್ಲಿ ಹೊಂಬಾಳೆ ತಂಡ ಇತ್ತೀಚೆಗೆ ಹರಕೆ ನೇಮ ನೀಡಿದ ಕುರಿತಂತೆ ಎದ್ದಿರುವ ವಿವಾದಕ್ಕೆ ಸಂಬಂಧಿಸಿ ತನ್ನ ಮೇಲೆ ತಪ್ಪು ಮಾಡಿರುವ ಆರೋಪಕ್ಕೆ ಸಂಬಂಧಿಸಿ ಸೋಮವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಬಾರೆಬೈಲ್ ವಿವಾದಕ್ಕೆ ಸಂಬಂಧಿಸಿ ವೈಯಕ್ತಿಕವಾಗಿ ಕ್ಷೇತ್ರ, ದೈವ ಹಾಗೂ ಆಡಳಿತ ಮಂಡಳಿ ಬಗ್ಗೆ ಎಲ್ಲಿಯೂ ಸ್ವರ ಎತ್ತಿಲ್ಲ ಎಂದು ಹೇಳಿದ ಅವರು, ದೈವಾರಾಧನೆಯ ಸಂದರ್ಭ ಕಂಡುಬರುವ ಲೋಪದೋಷಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದರು.
ದೈವಾರಾಧನೆಯ ಕುರಿತಂತೆ ನಡೆಯುತ್ತಿರುವ ಅಪಪ್ರಚಾರದ ಕುರಿತಂತೆ ಬಾರೆಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಾರ್ಥನೆ ಸಲ್ಲಿಕೆಯಾಗಿದ್ದು, ಇಂತಹ ಕಾರ್ಯಗಳು ಪ್ರತಿ ಗ್ರಾಮದಲ್ಲಿಯೂ ನಡೆಯಬೇಕಾಗಿದೆ. ಜಾರಂದಾಯ ಕ್ಷೇತ್ರವನ್ನು ಪ್ರತಿಷ್ಟೆ, ಪ್ರಶಸ್ತಿಗಾಗಿ ದುರುಪಯೋಗ ಮಾಡಿರುವುದು ಅಪಪ್ರಚಾರ ಮಾಡಿರುವುದು ಯಾರೆಂದು ಸ್ಪಷ್ಟವಾಗಬೇಕಿದೆ. ದೈವದ ಕ್ಷೇತ್ರದಲ್ಲಿ ಏರು ದನಿಯಲ್ಲಿ ಮಾತನಾಡಬಾರದು. ಕಾರಣಿಕದ ಸ್ಥಳದಲ್ಲಿ ಸುಳ್ಳು ಸಂದೇಶ ನೀಡಬಾರದು. ತೆಂಬರೆ ಕೋಲಿನಿಂದ ದೌರ್ಜನ್ಯ ಎಸಗಬಾರದು. ಆದರೆ ಅದೆಲ್ಲವೂ ಆ ಕ್ಷೇತ್ರದಲ್ಲಿ ನಡೆದಿದೆ ಎಂದವರು ಆಕ್ಷೇಪಿಸಿದರು.
ದೈವಾರಾಧನೆಯ ಇತಿಹಾಸದಲ್ಲಿ ದೈವ ಸಂಬಂಧಿತ ಪ್ರಾರ್ಥನೆ ಮಾತೃಭಾಷೆಯಾದ ತುಳುವಿನಲ್ಲಿಯೇ ಆಗಬೇಕು. ಆದರೆ ಹರಕೆ ನೇಮದ ವೇಳೆ ಕನ್ನಡದಲ್ಲಿ ನಡೆದಿದೆ. ಚಲನಚಿತ್ರ ನಟರಿಗೋಸ್ಕರ ನಿಯಮಗಳನ್ನು ಮುರಿದು ಹರಕೆ ನೇಮ ಮಾಡುವುದು, ಅವರಿಗೆ ಬೇಕಾದ ಭಾಷೆಯಲ್ಲಿ ನುಡಿ ಹೇಳುವುದು ನಡೆಯುತ್ತಾ ಸಾಗಿದರೆ ಮುಂದೆ ತುಳುನಾಡಿನ ನಂಬಿಕೆಯ ದೈವಾರಾಧನೆ ಪ್ಯಾನ್ ಇಂಡಿಯಾ ಆಗಿ ಬದಲಾಗುವ ಆತಂಕವಿದೆ. ದೈವಾರಾಧನೆಯಲ್ಲಿ ಮಾಂತ್ರಿಕ ದೃಷ್ಟಿ ಇರದೆ ಕಾರಣಿಕದ ದೃಷ್ಟಿ ಹೊಂದಿರಬೇಕು. ದೈವಾರಾಧನೆಯನ್ನು ವ್ಯಾಪಾರ, ವ್ಯವಹಾರಕ್ಕೆ ಬಳಸಬಾರದು. ಸಂಪ್ರದಾಯ ಮುರಿಯದೆ ದೈವಾರಾಧನೆಯನ್ನು ಮುಂದುವರಿಸಬೇಕೆಂಬುದು ನನ್ನ ಕಳಕಳಿಯಾಗಿದೆ ಎಂದವರು ಹೇಳಿದರು.
ತುಳುನಾಡಿನಲ್ಲಿ ದೈವಾರಾಧನೆಗೆ ಅನ್ಯ ಧರ್ಮೀಯರಿಂದ ಯಾವುದೇ ಅಪಪ್ರಚಾರ ನಡೆದಿಲ್ಲ. ಬದಲಾಗಿ ಇಲ್ಲಿನ ಕ್ರೈಸ್ತರು, ಮುಸಲ್ಮಾನರನ್ನು ಒಳಗೊಂಡು ಇಲ್ಲಿನ ದೈವಾರಾಧನೆಗಳು ನಡೆಯುತ್ತಿವೆ. ಹಾಗಾಗಿ ಧರ್ಮಗಳ ನಡುವೆ ಎತ್ತಿಕಟ್ಟುವ ಕೆಲಸ ಬೇಡ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ತಮ್ಮಣ್ಣ ಶೆಟ್ಟಿ ಪ್ರತಿಕ್ರಿಯಿಸಿದರು.







