ಮಂಗಳೂರು | ರಸ್ತೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ: ಸ್ಪಂದಿಸದ ಮೆಸ್ಕಾಂ; ಆರೋಪ

ಮಂಗಳೂರು: ನಗರದ ಬಿಕರ್ನಕಟ್ಟೆ ಜಯಶ್ರೀ ಗೇಟ್ನಿಂದ ಮರೋಳಿ ದೇವಸ್ಥಾನ ಮತ್ತು ಪಂಪವೆಲ್ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರವಿವಾರ ರಾತ್ರಿ ವಿದ್ಯುತ್ ತಂತಿ ತುಂಡಾದ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರೂ ಸ್ಪಂದಿಸಲಿಲ್ಲ ಎಂದು ಛಾಯಾಗ್ರಾಹಕ ಸ್ಟ್ಯಾನ್ಲಿ ಬಂಟ್ವಾಳ ಆರೋಪಿಸಿದ್ದಾರೆ.
ರವಿವಾರ ರಾತ್ರಿ ಸುಮಾರು 8:25ರ ವೇಳೆಗೆ ತಾನು ಮಕ್ಕಳ ಜೊತೆ ಈ ದಾರಿಯಾಗಿ ಮನೆಗೆ ನಡೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತುಂಡಾಗಿ ರಸ್ತೆಯಲ್ಲಿ ಬಿದ್ದಿತ್ತು. ತಕ್ಷಣ ಸ್ಥಳೀಯ ಮೆಸ್ಕಾಂ ಜೆಇ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. 5 ನಿಮಿಷದ ಬಳಿಕ ವಿದ್ಯುತ್ ಸಂಪರ್ಕ ಕಡಿದು ಹಾಕಲಾಯಿತು. ಅಲ್ಲದೆ ಸಿಬ್ಬಂದಿಯನ್ನು ಕಳುಹಿಸುತ್ತೇನೆ ಎಂದು ಹೇಳಿದ 15 ನಿಮಿಷದ ನಂತರ ಲೈನ್ ಮ್ಯಾನ್ ಕರೆ ಮಾಡಿದಾಗ ತಾನು ನಿರ್ದಿಷ್ಟ ಸ್ಥಳ ಹೇಳಿದರೂ ಬರಲಿಲ್ಲ. ಪೊಲೀಸ್ ಠಾಣೆಗೆ ತೆರಳಿದರೂ ಕರೆ ಸ್ವೀಕರಿಸಲಿಲ್ಲ. ಮತ್ತೆ ಲೈನ್ಮ್ಯಾನ್ಗೆ ಕರೆ ಮಾಡಿದಾಗ ಉಡಾಫೆಯಿಂದ ಉತ್ತರಿಸಿದರು ಎಂದು ದೂರಿರುವ ಛಾಯಾಗ್ರಾಹಕ ಸ್ಟ್ಯಾನ್ಲಿ ಬಂಟ್ವಾಳ, ತಾನು ಈ ಬಗ್ಗೆ ಎಚ್ಚರಿಕೆ ವಹಿಸದೇ ಇದ್ದಿದ್ದರೆ ಮೆಸ್ಕಾಂನವರ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ತಿಳಿಸಿದ್ದಾರೆ.





