ಭಾರತ -ಶ್ರೀಲಂಕಾ ಮಧ್ಯೆ ಉತ್ತಮ ಸಂಬಂಧ ಮುಂದುವರಿದಿದೆ: ನಿಶಾಂತ ಆಲ್ವಿಸ್

ಮಂಗಳೂರು: ಪ್ರಾಚೀನ ಕಾಲದಿಂದಲೂ ಭಾರತ -ಶ್ರೀಲಂಕಾ ಮಧ್ಯೆ ಉತ್ತಮ ಸಂಬಂಧವಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಶ್ರೀಲಂಕಾ ಪ್ರಧಾನಿ ಕಚೇರಿಯ ಮಾಜಿ ಮಾಧ್ಯಮ ಕಾರ್ಯದರ್ಶಿ ನಿಶಾಂತ ಆಲ್ವಿಸ್ ಹೇಳಿದ್ದಾರೆ.
ಶ್ರೀಲಂಕಾದ ಆರ್ಥಿಕ ಸಚಿವಾಲಯದ ಮಾಜಿ ಮಾಧ್ಯಮ ಕಾರ್ಯದರ್ಶಿ, ಏಷ್ಯನ್ ಮೀಡಿಯಾ ಮತ್ತು ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಪ್ಯಾಟಮ್ ಪ್ಯಾಸ್ಕ್ಯುಲ್ ನೇತೃತ್ವದ ಶ್ರೀಲಂಕಾದ ಅಧಿಕಾರಿಗಳ ಹಾಗೂ ಪತ್ರಕರ್ತರ ನಿಯೋಗವು ಶನಿವಾರ ಮಂಗಳೂರು ಪ್ರೆಸ್ಕ್ಲಬ್ಗೆ ಭೇಟಿ ನೀಡಿ ಪತ್ರಕರ್ತರ ಜೊತೆ ಸಂವಾದ ನಡೆಸಿತು.
ಈ ವೇಳೆ ಮಾತನಾಡಿದ ನಿಶಾಂತ ಆಲ್ವಿಸ್, ‘ಶ್ರೀಲಂಕಾ ಸಂಕಷ್ಟ ಎದುರಿಸಿದಾಗಲೆಲ್ಲ ಭಾರತ ನೆರವಿಗೆ ಬಂದಿದೆ. ಕೋವಿಡ್ ಸಾಂಕ್ರಾಮಿಕ, ಚಂಡಮಾರುತ, ನೆರೆಯಂತಹ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭಗಳಲ್ಲಿ ಭಾರತದ ಸಹಾಯಹಸ್ತವನ್ನು ಎಂದೂ ಮರೆಯುವಂತಿಲ್ಲ. ಉಭಯ ದೇಶಗಳ ಮಧ್ಯೆ ಇರುವ ಅವಿನಾಭಾವ ಸಂಬಂಧವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಪ್ರಜೆಗಳ ಮೇಲಿದೆ ಎಂದರು.
ಶ್ರೀಲಂಕಾ 2.5ರಿಂದ 3 ದಶಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಈ ಪೈಕಿ ಶೇ.70 ಬೌದ್ಧ ಧರ್ಮೀಯರಾಗಿದ್ದಾರೆ. ಜೊತೆಗೆ ತಮಿಳರು, ಸಿಂಹಳೀಯರು, ಮುಸ್ಲಿಮರು, ಹಿಂದೂಗಳು ಇದ್ದಾರೆ ಎಂದವರು ಮಾಹಿತಿ ನೀಡಿದರು.
ಮಾಧ್ಯಮಗಳಿಗೆ ಸಾಂವಿಧಾನಿಕವಾಗಿ ನೀಡಲಾಗಿರುವ ಹಕ್ಕುಗಳಿಂದಾಗಿ ಶ್ರೀಲಂಕಾದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಪತ್ರಕರ್ತರಿಗೆ ಸಿಗುತ್ತಿರುವ ವೇತನ ಕಡಿಮೆ. ಸರಕಾರದಿಂದ ಲಭಿಸುತ್ತಿರುವ ಸೌಲಭ್ಯವೂ ಕಡಿಮೆ ಎಂದು ನಿಶಾಂತ್ ಆಲ್ವಿಸ್ ತಿಳಿಸಿದರು.
ನಿಯೋಗದಲ್ಲಿ ಶ್ರೀಲಂಕಾದ ಹಿರಿಯ ಪತ್ರಕರ್ತರಾದ ಸಂಜೀವ ತಿಸೇರಾ, ಹೇಮಂತ ಕುಮಾರ ಸಿಂಘೆ, ದಾಮಿಸಿರಿ ಅಜಿತ್, ತುಷಾರ ಹೆಟ್ಟಿರಾಚಿ ಉಪಸ್ಥಿತರಿದ್ದರು.
ಇದೇ ವೇಳೆ ವೇಳೆ ಶ್ರೀಲಂಕಾದ ಪತ್ರಕರ್ತರ ನಿಯೋಗವನ್ನು ಪ್ರೆಸ್ಕ್ಲಬ್ ವತಿಯಿಂದ ಗೌರವಿಸಲಾಯಿತು.
ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಆರಿಫ್ ಪಡುಬಿದ್ರಿ, ವಿಲ್ಫ್ರೆಡ್ ಡಿಸೋಜ, ಖಜಾಂಚಿ ವಿಜಯ ಕೋಟ್ಯಾನ್, ಕಾರ್ಯದರ್ಶಿ ಸತೀಶ್ ಇರಾ, ಜೀವನ್, ದಯಾ ಕುಕ್ಕಾಜೆ, ಸಂದೀಪ್ ಕುಮಾರ್ ಎಂ, ಭಾಸ್ಕರ ರೈ ಕಟ್ಟ, ಪ್ರಣಾಮ್, ಅಭಿಜಿತ್ ಕೊಲ್ಪೆ, ಹಿರಿಯ ಪತ್ರಕರ್ತ ರಾಮಚಂದ್ರ ಭಂಡಾರ್ಕಾರ್ ಉಪಸ್ಥಿತರಿದ್ದರು.







