ಮಂಗಳೂರು | ನ.30ರಂದು ರೋಟರಿ ಚಿಣ್ಣರ ಉತ್ಸವ : ಕ್ರೀಡಾ, ಸಾಂಸ್ಕೃತಿಕ ಸ್ಪರ್ಧಾಕೂಟ

ಮಂಗಳೂರು ನ.26: ರೋಟರಿಯ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ರೋಟರಿ ಮಂಗಳೂರು ಸೆಂಟ್ರಲ್, ರೋಟರ್ಯಾಕ್ಟ್, ಮಂಗಳೂರು ಸಿಟಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ‘25ನೇ ವಾರ್ಷಿಕ ರೋಟರಿ ಚಿಣ್ಣರ ಉತ್ಸವ’ ಕ್ರೀಡಾ ಮತ್ತು ಸಾಂಸ್ಕ್ರತಿಕ ಸ್ಪರ್ಧಾಕೂಟ ನ.30ರಂದು ಬೆಳಗ್ಗೆ 9:00 ಗಂಟೆಗೆ ನಗರದ ಉರ್ವದ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಸಭಾಪತಿ ಡಾ.ಬಿ.ದೇವದಾಸ ರೈ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಒಂದು ದಿನದ ಕ್ರೀಡಾ ಸ್ಪರ್ಧಾಕೂಟ ಮತ್ತು ಮನೋರಂಜನಾ ಉತ್ಸವದಲ್ಲಿ ಜಿಲ್ಲೆಯ ವಿವಿಧ 10 ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರಗಳಿಂದ ಸುಮಾರು 434 ನಿವಾಸಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆ ಮತ್ತು ಕಲಾ ಕೌಶಲ್ಯವನ್ನು ಪ್ರದರ್ಶಿಸಲಿರುವರು ಎಂದರು.
ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟವನ್ನು ಕನ್ನಡ ಚಲನಚಿತ್ರ ನಟ ಡಾ.ಗುರುಕಿರಣ್ ಉದ್ಘಾಟಸಲಿರುವರು. ರೋಟರಿ ಜಿಲ್ಲೆಯ ಸಹಾಯಕ ಗವರ್ನರ್ ಚಿನ್ನಗರಿಗೌಡ ಮತ್ತು ವಲಯ ಸೇನಾನಿ ರವಿ ಜಲನ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು.
ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ರೈ ಕಟ್ಟ್ಟ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.
ಸಾಂಸ್ಕೃತಿಕ ಸ್ಪರ್ಧಾಕೂಟ ಮತ್ತು ಸಮಾರೋಪ ಸಮಾರಂಭವು ಸಂಜೆ 4:00 ಗಂಟೆಗೆ ಜರಗಲಿದೆ. ರೋಟರಿ ಜಿಲ್ಲೆ 3,181 ಚುನಾಯಿತ ಗವರ್ನರ್ ಸತೀಶ್ ಬೋಳಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ವಿವರಿಸಿದರು.
ಮಕ್ಕಳು ಕ್ರೀಡಾ ಮತ್ತು ಮನೋರಂಜನಾ ಉತ್ಸವದಲ್ಲಿ ತಮ್ಮ ಆಕರ್ಷಕ ಪಥ ಸಂಚಲನ ಮತ್ತು ಪ್ರತಿಭಾ, ಕೌಶಲ್ಯ, ಅನಾವರಣ ಮತ್ತು ಸಾಧನೆಯನ್ನು ಪ್ರದರ್ಶಿಸಲಿರುವರು. ಕ್ರೀಡಾಕೂಟವನ್ನು ರೋಟರಿ ಸಂಸ್ಥೆಯು 1996ರಿಂದ ಸತತವಾಗಿ ಆಯೋಜಿಸುತ್ತಿದೆ ಎಂದರು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್ , ಮಾಧ್ಯಮ ಸಲಹೆಗಾರ ಎಂ. ವಿ. ಮಲ್ಯ , ರೋಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷ ಅಕ್ಷಯ್ ಬಿ ರೈ ಮತ್ತು ಕಾರ್ಯದರ್ಶಿ ವಿವೇಕ ರಾವ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







