ಮಂಗಳೂರು | ರಾಜೇಂದ್ರ ಕುಮಾರ್ ಅನ್ನು ಅಭಿನಂದಿಸಿದ ಎಸ್ಡಿಸಿಸಿ ಬ್ಯಾಂಕ್ ಸಿಬ್ಬಂದಿ

ಮಂಗಳೂರು, ಡಿ.3: ಮಂಗಳೂರು ಕರಾವಳಿ ಕರ್ನಾಟಕದ ಸಾಮಾಜಿಕ-ಆರ್ಥಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಇತ್ತೀಚೆಗೆ ಬಹರೈನ್ ಹಾಗೂ ಬೆಂಗಳೂರಿನಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಿ, ಸೋಮವಾರ ಎಸ್ಡಿಸಿಸಿ ಬ್ಯಾಂಕಿಗೆ ಆಗಮಿಸಿದಾಗ ಅವರನ್ನು ಬ್ಯಾಂಕ್ ನೌಕರರು ಗೌರವಪೂರ್ವಕವಾಗಿ ಅಭಿನಂದಿಸಿದ್ದಾರೆ.
ಬಹರೈನ್ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಮೊದಲ ಬಾರಿ ನೀಡಿದ ಪ್ರತಿಷ್ಠಿತ ‘ಸಹಕಾರಿ ಸಾರ್ವಭೌಮ’ ಪ್ರಶಸ್ತಿಯನ್ನು ನ.28ರಂದು ಬಹರೈನ್ನಲ್ಲಿ ಹಾಗೂ ಕರ್ನಾಟಕ ಮಾಧ್ಯಮ ಸಹಕಾರ ಹಾಗೂ ದಿ. ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಬೆಂಗಳೂರು ಇದರ ವತಿಯಿಂದ ನೀಡಲಾದ ಪ್ರತಿಷ್ಠಿತ ವಿಶ್ವ ಜಾಗತಿಕ ಪ್ರಭಾವಿ ನಾಯಕತ್ವ ಶ್ರೇಷ್ಠತಾ ಪ್ರಶಸ್ತಿಯನ್ನು ನ.27ರಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಪ್ರದಾನ ಮಾಡಲಾಗಿತ್ತು.
ಅಭಿಮಾನ ಪೂರ್ವಕ ಗೌರವ :
ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಈ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಸಹಕಾರಿ ರಂಗದ ಜನಪರ ಸೇವೆಗಳಿಗೆ ಒಲಿದು ಬಂದಿದೆ. ಎಸ್ಡಿಸಿಸಿ ಬ್ಯಾಂಕ್ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಕುಟುಂಬಗಳ ಆರ್ಥಿಕ ಶಕ್ತಿಯಾಗಿದ್ದ ಇವರು ಎಸ್ಡಿಸಿಸಿ ಬ್ಯಾಂಕ್ನ್ನು ಕಳೆದ 31 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿ ಈ ಬ್ಯಾಂಕ್ನ್ನು ರಾಷ್ಟ್ರೀಕೃತ ಬ್ಯಾಂಕುಗಳ ಸ್ಥಾನಮಾನಕ್ಕೇರಿಸಿದ್ದಾರೆ. ಇವರ ವಿಶಿಷ್ಟ ಕಾರ್ಯ ವೈಖರಿಯಿಂದ ಎಸ್ಸಿಡಿಸಿಸಿ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ವಿವಿಧ ವಿಭಾಗಗಳ ಮೂಲಕ ಅಭಿನಂದನೆ :
ಎಸ್ಡಿಸಿಸಿ ಬ್ಯಾಂಕಿನ ವಸೂಲಾತಿ ವಿಭಾಗದ ಉಪ ಮಹಾಪ್ರಬಂಧಕ ನಿತ್ಯಾನಂದ ಶೇರಿಗಾರ್, ಲೆಕ್ಕಪತ್ರ ವಿಭಾಗದ ಉಪ ಮಹಾಪ್ರಬಂಧಕ ಶರ್ಮಿಳಾ ಎಸ್. ಭಟ್, ಯೋಜನೆ , ಶಾಖೆ ನಿಯಂತ್ರಣ ವಿಭಾಗದ ಉಪ ಮಹಾಪ್ರಬಂಧಕ ವಿದ್ಯಾ ಕಾರ್ನಾಡ್, ಸಹಾಯಕ ಮಹಾಪ್ರಬಂಧಕ ರಾಜೇಶ್ ಶೆಟ್ಟಿ, ಕೊಡಿಯಾಲ್ ಬೈಲ್ ಶಾಖೆಯ ಉಪ ಮಹಾಪ್ರಬಂಧಕ ಜ್ಯೋತಿ ಬಾಳಿಗ, ಆಡಳಿತ ವಿಭಾಗದ ಸಹಾಯಕ ಮಹಾಪ್ರಬಂಧಕರಾದ ಸಹನಾ ಬಿ. ಶೆಟ್ಟಿ, ಸಾಲ ವಿಭಾಗದ ಸಹಾಯಕ ಮಹಾಪ್ರಬಂಧಕ ಹೇಮಲತಾ ಕೆ., ಸುಜಾತ ಭಟ್, ಕಂಪ್ಯೂಟರ್ ವಿಭಾಗದ ವ್ಯವಸ್ಥಾಪಕ ಸುನಿಲ್ ಕುಮಾರ್ ಸೇರಿದಂತೆ ವಿಭಾಗದ ಸಿಬ್ಬಂದಿ ವರ್ಗ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರನ್ನು ಅಭಿನಂದಿಸಿದೆ.







