ಮಂಗಳೂರು | ಸಂಯೋಜಕ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

ಮಂಗಳೂರು,ಡಿ.3: ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಆಶ್ರಯದಲ್ಲಿ ಗ್ರಾಹಕ ಕ್ಲಬ್ ನ ಸಂಯೋಜಕ ಶಿಕ್ಷಕರಿಗೆ ಗ್ರಾಹಕ ಶಿಕ್ಷಣದ ಒಂದು ದಿನದ ತರಬೇತಿ ಕಾರ್ಯಾಗಾರ ಮಂಗಳವಾರ ನಗರದ ಬಿಜೈ ಕಚೇರಿಯಲ್ಲಿ ನಡೆಯಿತು.
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಗೌರವಾಧ್ಯಕ್ಷ ಎಂ.ಜೆ ಸಾಲ್ಯಾನ್ ಅವರು ತಮ್ಮ ಪ್ರಸ್ತಾವನೆಯಲ್ಲಿ ಗ್ರಾಹಕ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಮಾಹಿತಿಯನ್ನು ನೀಡಿದರು. ಅದೇ ರೀತಿ ಗ್ರಾಹಕ ಕಾಯಿದೆ ಜಾರಿಗೆ ಬಂದ ಮಾಹಿತಿಯನ್ನು ನೀಡಿದರು.
ಗ್ರಾಹಕ ಕ್ಲಬ್ ಗಳ ರಚನೆ, ನಿರ್ವಹಣೆ ಹಾಗೂ ಅದರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಜತೆ ಕಾರ್ಯದರ್ಶಿ ರಾಯಿ ರಾಜ್ ಕುಮಾರ್ ಅವರು ನೀಡಿದರು. ಗ್ರಾಹಕ ಕಾಯಿದೆಯಲ್ಲಿ ಜಾರಿಗೆ ತರುವಲ್ಲಿರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಇರುವ ಸಾಧ್ಯತೆಗಳ ಬಗ್ಗೆ ತಿಳಿಸಿದರು. ಜಿಲ್ಲಾ ಗ್ರಾಹಕ ಆಯೋಗ, ಅದರ ರಚನೆ, ಕಾರ್ಯ ವ್ಯಾಪ್ತಿಗಳ ಬಗ್ಗೆ ತಿಳಿಸಿ ಹೇಳಲಾಯಿತು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿ ನವೀನ್ ಕೃಷ್ಣ ಅವರು ಗ್ರಾಹಕ ವ್ಯವಹಾರಗಳ ಚಟುವಟಿಕೆಗಳು ಮತ್ತು ಆಹಾರ ಸರಬರಾಜು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಖಜಾಂಚಿ ಜಯಪ್ರಕಾಶ್ ರಾವ್, ಕಾರ್ಯಾಧ್ಯಕ್ಷ ರಫೀಕ್ ಕುಕ್ಕಾಡಿ ಹಾಜರಿದ್ದರು. ಮಾಹಿತಿ ಕೇಂದ್ರದ ಅಧ್ಯಕ್ಷೆ ಸುನಂದ ಕುಂಬ್ಳೆ ಸ್ವಾಗತಿಸಿದರು. ರಾಯಿ ರಾಜ್ ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ನಿವೃತ್ತ ನರ್ಸ್ ಶಿಕ್ಷಕಿ ಸುಮಂಗಲಾ ವಂದಿಸಿದರು.







