ವಾಮಂಜೂರು: ಅಣಬೆ ತಯಾರಿಕಾ ಘಟಕದಲ್ಲಿ ಯಾವುದೇ ರಾಸಾಯನಿಕವನ್ನು ಬಳಸಲಾಗುತ್ತಿಲ್ಲ: ಜೆ.ಆರ್.ಲೋಬೊ ಸ್ಪಷ್ಟನೆ

ಮಂಗಳೂರು: ವೈಟ್ ಗ್ರೋವ್ ಅಗ್ರಿ ಎಲ್ಎಲ್ಪಿ ಅಣಬೆ ತಯಾರಿಕಾ ಘಟಕದಲ್ಲಿ ಯಾವುದೇ ರಾಸಾಯನಿಕವನ್ನು ಬಳಸಲಾಗುತ್ತಿಲ್ಲ. ಇದು ಸಂಪೂರ್ಣ ಸಾವಯವ ಮಾದರಿಯಲ್ಲಿ ತಯಾರಿಸುವ ಕೃಷಿಯಾಗಿದ್ದು, ದುರ್ವಾಸನೆ ತಡೆಗೆ ಯಂತ್ರೋಪಕರಣಗಳನ್ನು ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಘಟಕದಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ದುರ್ವಾಸನೆ ಹರಡದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೆ.ಆರ್. ಲೋಬೊ ಸ್ಪಷ್ಟನೆ ನೀಡಿದ್ದಾರೆ.
ವಾಮಂಜೂರಿನ ತಿರುವೈಲು ಘಟಕದಲ್ಲಿ ಅಳವಡಿಸಲಾದ ದುರ್ವಾಸನೆ ನಿಯಂತ್ರಣ ಯಂತ್ರೋಪಕರಣಗಳು ಹಾಗೂ ವಾಸನೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡದಂತೆ ಕೈಗೊಳ್ಳಲಾದ ಕ್ರಮದ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ಸ್ಥಳದಲ್ಲಿ ಅವರು ಮಾಹಿತಿ ನೀಡಿದರು.
ದೇಶ, ವಿದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಹಲವಾರು ಘಟಕಗಳನ್ನು ವೀಕ್ಷಿಸಿದ ಬಳಿಕ ಅತ್ಯುನ್ನತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು 2019ರಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ. ಆರಂಭದಲ್ಲಿ ಘಟಕದಲ್ಲಿ, ಅಣಬೆ ತಯಾರಿಕೆಗೆ ಅತೀ ಮುಖ್ಯವಾದ ಗೊಬ್ಬರ ತಯಾರಿಕಾ ಸಂಸ್ಕರಣಾ ಘಟಕ ತೆರೆದಿದ್ದ ಕಾರಣ ಆ ಘಟಕದಿಂದ ದುರ್ವಾಸನೆ ಹೊರ ಹೋಗುತ್ತಿತ್ತು. ಆರಂಭದಲ್ಲಿ ಇದು ಅಷ್ಟಾಗಿ ಇರಲಿಲ್ಲ. ಆದರೆ ಇತ್ತೀಚೆಗೆ ಸ್ಥಳೀಯರಿಂದಲೂ ಆಕ್ಷೇಪ ವ್ಯಕ್ತವಾಗಿದ್ದು, ಜಿಲ್ಲಾಡಳಿತದ ಸೂಚನೆಯ ಮೇರೆಗೆ ದುರ್ವಾಸನೆ ನಿಯಂತ್ರಕಗಳನ್ನು ಅಳವಡಿಸಲಾಗಿದೆ. ಈಗಾಗಲೇ ಈ ಕಾರ್ಯ ಶೇ. 80ರಷ್ಟು ಪೂರ್ಣಗೊಂಡಿದೆ. ಇನ್ನೂ ಕೆಲವೆಡೆ ದುರ್ವಾಸನೆ ಸೋರಿಕೆಯಾಗುತ್ತಿರುವುದನ್ನು ಪತ್ತೆಹಚ್ಚಿ ಅದನ್ನೂ ದುರ್ವಾಸನೆ ಹೊರ ಹೋಗದಂತೆ ಮಾಡುವ ಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಮಂಗಳೂರಿನ ಈ ಘಟಕದಲ್ಲಿ ದುರ್ವಾಸನೆ ನಿಯಂತ್ರಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮೂರು ಎಕರೆ ಪ್ರದೇಶದಲ್ಲಿ ಈ ಘಟಕ ಕಾರ್ಯಾಚರಿಸುತ್ತಿದೆ. ಸುಮಾರು 170 ಮಂದಿ ಕೆಲಸ ನಿರ್ವಹಿಸುತ್ತಿದ್ದು, ಅವರಲ್ಲಿ 50 ಮಂದಿ ಸ್ಥಳೀಯರಾಗಿದ್ದಾರೆ. ಅಲ್ಪ ಜಾಗದಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಸೃಷ್ಟಿಸುವ ವ್ಯವಸ್ಥೆ ಇದಾಗಿದೆ. ಇದು ಆಹಾರವಾಗಿದ್ದು, ಸ್ವಚ್ಛತೆ ಕಾಪಾಡುವುದು ಅತೀ ಅಗತ್ಯವಾಗಿದೆ. ಇಲ್ಲವಾದಲ್ಲಿ ಬ್ಯಾಕ್ಟೀರಿಯಾ/ಫಂಗಸ್ ಸಮಸ್ಯೆಯಿಂದ ಕೃಷಿ ಹಾಳಾಗುವ ಸಮಸ್ಯೆ ಇರುವುದರಿಂದ ಜನರ ಪ್ರವೇಶಕ್ಕೆ ಇಲ್ಲಿ ಅವಕಾಶ ನೀಡಲಾಗುತ್ತಿಲ್ಲ. ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾಧಿಕಾರಿ ಕಾಂಪೋಸ್ಟ್ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಿಸಲು ಆದೇಶಿಸಿದ್ದರು. ನಂತರ ಗಾಳಿಯನ್ನು ಶುದ್ಧೀಕರಣಗೊಳಿಸಲು ಯಂತ್ರೋಪಕರಗಳನ್ನು ಅಳವಡಿಸಿ ಜುಲೈ 31ರಿಂದ ಆ. 19ರವರೆಗೆ ಕಾಂಪೋಸ್ಟ್ ಘಟಕ ಆರಂಭಿಸಿ ಯಂತ್ರೋಪಕರಣ ನಿರ್ವಹಣೆ ಹಾಗೂ ಗಾಳಿ ಸುದ್ಧೀಕರಣ ವಿಚಾರದಲ್ಲಿ ಸಮೀಕ್ಷೆ ನಡೆಸಲು ಆದೇಶಿಸಲಾಗಿದೆ. ಸರಕಾರದ ಸ್ವತಂತ್ರ ಸಂಸ್ಥೆಗಳಾದ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎನ್ಎಬಿಎಲ್ ಪ್ರಯೋಗ ಶಾಲೆ ಇಲ್ಲಿ ದೈನಂದಿನ ಪರೀಕ್ಷೆ ನಡೆಸಿ ದಾಖಲೆ ಮಾಡುತ್ತಿದೆ. ಈ ದಾಖಲೆಗಳನ್ನು ಮಂಗಳೂರಿನ ನಗರ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನೇಮಕವಾಗಿರುವ ತಜ್ಞರ ಸಮಿತಿಗೆ ನೀಡಲಾಗುತ್ತಿದೆ. ಸಮಿತಿ ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ನೀಡಲಿದೆ ಎಂದು ಅವರು ಹೇಳಿದರು.
ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ಉನ್ನತ ತಂತ್ರಜ್ಞಾನ ಮೂಲಕ ಅಣಬೆ ತೋಟಗಾರಿಕಾ ಕೃಷಿಯನ್ನು ಮಾಡಿ ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕೈಗಾರಿಕೆ ಸಹಕಾರಿಯಾಗಲಿದೆ. ಪ್ರೋಟೀನ್ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಅಣಬೆಗೆ ದೇಶ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ ಎಂದು ಅವರು ಹೇಳಿದರು.
ಘಟಕಕ್ಕಾಗಿ ಜಾಗವನ್ನು ಲೀಸ್ಗೆ ಪಡೆಯಲಾಗಿದ್ದು, ವೈಟ್ ಗ್ರೋವ್ ಸಂಸ್ಥೆ ಹಂದಿ ಸಾಕಣೆ ಮಾಡುತ್ತಿಲ್ಲ. ಅದು ಸಂಸ್ಥೆಗೆ ಸಂಬಂಧಪಟ್ಟಿದ್ದಲ್ಲ. ಅದು ಜಾಗದ ಮಾಲಕರದ್ದಾಗಿದ್ದು, ಅದನ್ನು ಅವರು ತೆರವುಗೊಳಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಲೋಬೊ ಪ್ರತಿಕ್ರಿಯಿಸಿದರು.
ಕಾಂಪೋಸ್ಟ್ ತಯಾರಿಕೆಗೆ ಭತ್ತದ, ಗೋದಿ ಹುಲ್ಲನ್ನು ನೀರಿನಲ್ಲಿ ನೆನೆಹಾಕಿ ಅದಕ್ಕೆ ದನ, ಕುದುರೆ ಅಥವಾ ಕೋಳಿ ಗೊಬ್ಬರ ಮಿಶ್ರ ಮಾಡಲಾಗುತ್ತದೆ. ಇದು ಅಲ್ಪಮಟ್ಟಿಗೆ ಹೈಡ್ರೋಜನ್ ಸಲ್ಪೈಡ್ ಮತ್ತು ಅಮೋನಿಯ ಹೊರಸೂಸುತ್ತದೆ. ಇದು ವಾಸನೆಗೆ ಕಾರಣವಾಗಿದ್ದು, ಈ ಘಟಕವನ್ನು ಸಂಪೂರ್ಣವಾಗಿ ಬಂದ್ ಮಾಡಿ ಒಳಗಿನಿಂದ ಯಾವುದೇ ಅನಿಲ ನೇರವಾಗಿ ಹೊರ ಹೋಗದಂತೆ ಕ್ರಮ ವಹಿಸಲಾಗಿದೆ. ಹೊಸ ಯಂತ್ರೋಪಕರಣದ ಮೂಲಕ ದುರ್ವಾಸನೆ ಶುದ್ಧಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜೆ.ಆರ್. ಲೋಬೊ ಸ್ಪಷ್ಟೀಕರಣ ನೀಡಿದ್ದಾರೆ.







