ಮೂಡುಬಿದಿರೆ | ಹಿರಿಯ ಯಕ್ಷಗಾನ ಭಾಗವತ ಕಣಿಯೂರು ಸೂರ್ಯಕಾಂತ್ ಭಟ್ ಗೆ ಸಂಸ್ಮರಣಾ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಶ್ರೀಮಂತ ಕಲೆಯಾದ ಯಕ್ಷಗಾನದ ಹಿಂದಿನ ಪರಂಪರೆಯನ್ನು ಜೈನ ಪರಂಪರೆಯ ಮೂಲಕ ನೆನಪಿಸುವಂತಹ ಪ್ರಯತ್ನವನ್ನು ಶ್ರೀಧರ ಪಾಂಡಿಯವರ ನೆನಪಿನೊಂದಿಗೆ ಮಾಡುತ್ತಿದ್ದೇವೆ. ಇದು ನಮ್ಮ ಬಹು ವರ್ಷಗಳ ಕನಸು. ಮುಂಬರುವ ದಿನಗಳಲ್ಲಿ ಯಕ್ಷಗಾನವನ್ನು ದೊಂದಿ ಬೆಳಕಿನೊಂದಿಗೆ ಯಕ್ಷಗಾನ ಪರಂಪರೆಯ ಮೂಲ ಸ್ವರೂಪದಲ್ಲಿ ಯಾವುದೇ ಆಧುನಿಕ ಉಪಕರಣಗಳು ಇಲ್ಲದೇ, ಪ್ರಕೃತಿಯೊಂದಿಗೆ ಬೆರೆತು ಪ್ರಸ್ತುತಪಡಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಅವರು ಸಾವಿರ ಕಂಬದ ಬಸದಿಯ ಆವರಣದ ಮರೋಡಿ ಗುಡ್ಡನ್ಬೆಟ್ಟು ಗುತ್ತು ದಿ.ಶಾಂತಿರಾಜ ಪಾಂಡಿ ಮತ್ತು ನಲ್ಲೂರು ಮರ್ದ್ರಬೆಟ್ಟು ದಿ.ಭುಜಬಲಿ ಅಧಿಕಾರಿ ಸ್ಮರಣೀಯ ವೇದಿಕೆಯಲ್ಲಿ ರವಿವಾರ ನಡೆದ ಯಕ್ಷಗಾನ ಅರ್ಥಧಾರಿ, ಪ್ರಸಂಗಕತೃ ಎಂ. ಶ್ರೀಧರ ಪಾಂಡಿ ಸಾಣೂರು ಅವರ 14ನೇ ವರ್ಷದ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪ್ರಶಸ್ತಿ ಪ್ರದಾನ :
ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಭಾಗವತ ಕಣಿಯೂರು ಸೂರ್ಯನಾರಾಯಣ ಭಟ್ ಅವರಿಗೆ ಶ್ರೀಧರ ಪಾಂಡಿಯವರ ಸಂಸ್ಕರಣಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಜಿತ್ ಜೈನ್ ನಾರಾವಿ ಧಾರ್ಮಿಕ ಉಪನ್ಯಾಸ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕ, ವಾಗ್ಮಿ ಮುನಿರಾಜ ರೆಂಜಾಳ ಸಂಸ್ಮರಣಾ ಮಾತುಗಳನ್ನಾಡಿದರು.
ಶ್ರೀ ಆದಿನಾಥ ಸ್ವಾಮಿ ಬಸದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೊ.ಕೆ.ಗುಣಪಾಲ ಕಡಂಬ, ನಿವೃತ್ತ ಪ್ರಾಂಶುಪಾಲರಾದ ಡಾ.ಉದಯ ಕುಮಾರ್ ಇರ್ವತ್ತೂರು, ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ,ಶ್ರೀಧರ್ ಪಾಂಡಿ ಅವರ ಪುತ್ರ ಶ್ರೀಕಾಂತ್ ಪಾಂಡಿ ಉಪಸ್ಥಿತರಿದ್ದರು.
ಶ್ರೀಶಾ ಅತಿಕಾರಿ ಸ್ವಾಗತಿಸಿದರು. ಜಯಶ್ರೀ ಅತಿಕಾರಿ ಕಾರ್ಯಕ್ರಮ ನಿರೂಪಿಸಿದರು. ನಾಗವರ್ಮ ಜೈನ್ ಸನ್ಮಾನಪತ್ರ ವಾಚಿಸಿದರು. ವರ್ಷಾ ಅಧಿಕಾರಿ ವಂದಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಎಂ.ಶ್ರೀಧರ ಪಾಂಡಿ ಸಾಣೂರು ಅವರು ರಚಿಸಿದ ಪ್ರಸಂಗವಾದ ಜಿನಕಥೆಯ ದೊಂದಿ ಬೆಳಕಿನ ಯಕ್ಷಗಾನ ಶ್ರೀ ಪಾರ್ಶ್ವನಾಥ ಚರಿತೆಯನ್ನು ಪ್ರಥಮ ಬಾರಿಗೆ ಪ್ರದರ್ಶಿಸಲಾಯಿತು.







