ಮೂಡುಬಿದಿರೆ | ಯುವಜನತೆ ಕೃಷಿಯನ್ನು ಪ್ರೀತಿಸಬೇಕು : ಆಸ್ಮಾ ಬಾನು

ಮೂಡುಬಿದಿರೆ : ಜೀವ-ಜೀವನದ ನಡುವೆ ಇರುವ ಸಂಬಂಧ ಕೃಷಿ. ಯುವ ಜನತೆ ಕೃಷಿಯನ್ನು ಪ್ರೀತಿಸಿದರೆ ಮಾತ್ರ ಅದು ಉಳಿಯಲು ಸಾಧ್ಯ ಎಂದು ಕಾರ್ಕಳದ ಪೆರ್ವಾಜೆ ಸರಕಾರಿ ಮಾ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಆಸ್ಮಾ ಬಾನು ಹೇಳಿದರು.
ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ಕಲ್ಪವೃಕ್ಷ ಸಭಾಭವನದಲ್ಲಿ ನಡೆಯುತ್ತಿರುವ ʼಸಹಕಾರ ಸಪ್ತಾಹ ಸಂಭ್ರಮʼದ ಎರಡನೇ ದಿನವಾಗಿರುವ ಶನಿವಾರದಂದು ಸಹಕಾರ-ಪರಿಸರ ಸಂರಕ್ಷಣೆ-ಕೃಷಿ, ಪಶು ಸಂಗೋಪನೆ- ಗ್ರಾಮೀಣ ಅಭಿವೃದ್ಧಿ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ನಾವು ಇಂದು ರಾಸಾಯನಿಕ ಪದಾರ್ಥಗಳನ್ನು ತುಂಬಿರುವ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿ ರೋಗಗಳು ಬೆಳೆಯುವಂತೆ ಮಾಡುತ್ತಿದ್ದೇವೆ ಎಂದು ಎಚ್ಚರಿಸಿದ ಅವರು, ನಮ್ಮ ಅನ್ನದ ಬಟ್ಟಲಿನಲ್ಲಿ ಕಲ್ಮಶ ಪದಾರ್ಥಗಳು ಸೇರದಂತೆ ಮಾಡಲು ದೇಶಿಯ ಭತ್ತಗಳನ್ನು ಬೆಳೆಸಿ, ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ಅಕ್ಕಿ ಮತ್ತು ಸಾತ್ವಿಕ ಆಹಾರಗಳನ್ನು ಸೇವಿಸುವಂತೆ ಸಲಹೆ ನೀಡಿದರು.
ದ. ಕ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ. ಮಾತನಾಡಿ, ವಿದ್ಯಾಥಿ೯ಗಳು ಮೆಡಿಕಲ್, ಎಂಜಿನಿಯರ್ ಪದವಿಯನ್ನು ಪಡೆಯುವಂತೆಯೇ ಕೃಷಿರಂಗದಲ್ಲಿಯೂ ಪದವಿಯನ್ನು ಪಡೆಯಲು ಆಸಕ್ತಿ ವಹಿಸಬೇಕು. ಇಲ್ಲಿ ಉದ್ಯೋಗ ಮತ್ತು ಪಿಹೆಚ್ ಡಿಯನ್ನು ಮಾಡಲು ಅವಕಾಶವಿದೆ ಹಾಗೂ ಸರಕಾರಗಳು ಇದಕ್ಕೆ ಆರ್ಥಿಕ ಬೆಂಬಲವನ್ನು ನೀಡುತ್ತಿವೆ ಎಂದು ತಿಳಿಸಿದರು.
ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ, ಕೃಷಿ ನಮ್ಮ ಜೀವಾಳ. ನೆಲ ಜಲ, ಮಣ್ಣು ಇವುಗಳನ್ನು ನಾವು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭವಿಷ್ಯ ಭಾರತದ ಯುವ ಮನಸ್ಸುಗಳು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಗತಿಪರ ಕೃಷಿಕ ರಾಜು ಪೂಜಾರಿ ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು.
ಸಾಧಕ ರೈತರಿಗೆ ಸನ್ಮಾನ : ಕೃಷಿಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅಜಿತ್ ಕುಮಾರ್ ಜೈನ್, ಚಂದು ಭಂಡಾರಿ, ಪೌಲ್ ಪಿ. ಎಸ್. ರೆಬೆಲ್ಲೋ, ಸುಂದರ ಪೂಜಾರಿ, ಜಗನ್ನಾಥ ಶೆಟ್ಟಿ, ಸುರೇಂದ್ರ ಶೆಟ್ಟಿ ಹಾಗೂ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು.
63 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಕನ್ನಡ/ ಹಿಂದಿ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ 63 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ನೆಲ್ಲಿಕಾರು ವ್ಯ.ಸೇ.ಸ. ಸಂಘದ ಅಧ್ಯಕ್ಷ ಜಯವರ್ಮ ಜೈನ್ ಗೌರವ ಉಪಸ್ಥಿತರಿದ್ದರು.
ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಕಳೆದ ವರ್ಷದ ಕಲ್ಪವೃಕ್ಷ ಪ್ರಶಸ್ತಿ ಪುರಸ್ಕೃತರಾದ ಗಣೇಶ್ ನಾಯಕ್ ಉಪಸ್ಥಿತರಿದ್ದರು.
ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ.ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚೇತನಾ ರವೀಂದ್ರ ಹೆಗ್ಡೆ ಸನ್ಮಾನಿತರ ಮಾಹಿತಿ ನೀಡಿದರು. ಪತ್ರಕರ್ತ, ಉಪನ್ಯಾಸಕ ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.







