ಬಾಕಿ ವೇತನ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಬಿ.ಸಿ.ರೋಡ್ ನಲ್ಲಿ ಅಕ್ಷರ ದಾಸೋಹ ನೌಕರರಿಂದ ಧರಣಿ

ಬಂಟ್ವಾಳ, ಅ.18: ಅಕ್ಷರ ದಾಸೋಹ ನೌಕರರಿಗೆ ಬಾಕಿ ಇರುವ ವೇತನ ಕೂಡಲೇ ಪಾವತಿಸುವಂತೆ ಹಾಗೂ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಕೂಡಲೇ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ (ಎಐಸಿಸಿಟಿಯು) ವತಿಯಿಂದ ಬಿ.ಸಿ.ರೋಡ್ ಆಡಳಿತ ಸೌಧದ ಮುಂಭಾಗದಲ್ಲಿ ಧರಣಿ ನಡೆಯಿತು.
ಧರಣಿಯನ್ನುದ್ದೇಶಿಸಿ ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ, ಅಕ್ಷರ ದಾಸೋಹ ನೌಕರರು ಕಳೆದ ಇಪ್ಪತ್ತು ವರ್ಷಗಳಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು, 3 ತಿಂಗಳಿಂದ ಸಂಬಳ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ಚುನಾವಣೆ ಸಂದರ್ಭದಲ್ಲಿ ಸಂಬಳ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದು ಸರಕಾರವು ಈವರೆಗೆ ಏರಿಕೆ ಮಾಡಿರುವುದಿಲ್ಲ ಕೂಡಲೇ ವೇತನ ಏರಿಕೆ ಮಾಡದಿದ್ದಲ್ಲಿ ಅ.30ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಧರಣಿಯ ಬಳಿಕ ತಹಶೀಲ್ದಾರ್ ಮುಖಂತರ ಮುಖ್ಯಮಂತ್ರಿಗೆ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಮುಖಾಂತರ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಜಯಶ್ರೀ ಆರ್.ಕೆ. ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವಾಣಿಶ್ರೀ, ಮುಖಂಡರಾದ ಜಯಂತಿ ಶಂಭೂರು, ಲಲಿತಾಂಬಿಕೆ, ವನಿತಾ ದಡ್ಡಲಕಾಡು, ಮಾಲತಿ, ವಿನಯ ನಡುಮೊಗರು, ಮಮತಾ ಬಿಳಿಯೂರು ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು.







