ಮುಡಿಪುವಿನಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ: ಬಾಳಪ್ಪರ ನೆನಪು, ಕುಂಬಾರಿಕೆ ವೃತ್ತಿ ಸಂವಾದ, ಪ್ರಾತ್ಯಕ್ಷಿಕೆ

ಕೊಣಾಜೆ: ಯಾವ ತಂತ್ರಜ್ಞಾನದ ಯಾಂತ್ರಿಕೃತ ಬದುಕು ನಮಗೆ ಶ್ರೀಮಂತಿಕೆ, ಪ್ರಗತಿಯನ್ನು ತಂದು ಕೊಟ್ಟಿತೋ ಅದೇ ಪ್ರಗತಿ ನಮಗರಿವಾಗದಂತೆ ನಮ್ಮನ್ನು ನಾಶ ಮಾಡುತ್ತಿವೆ. ಪ್ರೀತಿಯ, ಸಹಬಾಳ್ವೆಯ, ಆರೋಗ್ಯಕರ ಬದುಕಿಗಾಗಿ ಯಾಂತ್ರಿಕ ಬದುಕು ದೂರವಾಗಿ ಕಾಯಕದ ಬದುಕು ವಾಪಸ್ಸಾಗಬೇಕು. ಕಾಯಕ ಪ್ರಣೀತ ಬದುಕು ನಮ್ಮದಾಗಬೇಕು ಎಂದು ರಂಗಕರ್ಮಿ, ಚಿಂತಕ ಪ್ರಸನ್ನ ಹೆಗ್ಗೋಡು ಅವರು ಹೇಳಿದರು.
ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ ಕರ್ನಾಟಕ ವತಿಯಿಂದ ಪ್ರೀತಿ ಸಹಬಾಳ್ವೆಗಾಗಿ ನಮ್ಮ ನಡೆ ಆಶಯದೊಂದಿಗೆ ಡಿ.7 ರ ವರೆಗೆ ನಡೆಯಲಿರುವ ಸಾಂಸ್ಕೃತಿಕ ಯಾತ್ರೆಯ ಭಾಗವಾಗಿ ಮುಡಿಪುವಿನ ಕುಲಾಲ ಸಂಘ ಇದರ ಸಹಯೋಗದೊಂದಿಗೆ ಮುಡಿಪುವಿನ ಕುಲಾಲ ಸಮುದಾಯ ಭವನದಲ್ಲಿ ಮಂಗಳವಾರ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪರ ನೆನಪು, ಕುಂಬಾರಿಕೆ ಮತ್ತು ಕುಲವೃತ್ತಿಗಳು ಕುರಿತು ಸಂವಾದ, ಕುಂಬಾರಿಕೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಲಾಲರ ಹಾಗೆಯೇ ಇಡೀ ಮನುಕುಲವೇ ಕಾಯಕ ಮೂಲಕ ಬದುಕನ್ನು ಕಟ್ಟುಕೊಂಡಿದ್ದರು. ಆದರೆ ಬಳಿಕದ ಕೈಗಾರೀಕರಣ ಪರಿಣಾಮ ಸೃಷ್ಟಿಯಾದ ಯಾಂತ್ರಿಕೃತ ಶ್ರೀಮಂತಿಕೆ, ಪ್ರಗತಿಯ ನಡುವೆಯೇ ನಮ್ಮ ನಡುವಿನ ಸಂಬಂಧಗಳು ದೂರವಾಗುತ್ತಿವೆ, ಜಗಳಗಳು ಹೆಚ್ಚಾಗುತ್ತಿದೆ. ದೇವರ ಜೊತೆಗಿನ ಸಂಬಂಧಗಳು ದೂರವಾಗುತ್ತಿವೆ. ಗಾಂಧೀಜಿಯವರ ಆಶಯದಂತೆ ಜಾತಿಬೇಧ ದೂರಗೊಳಿಸಿ, ಕಾಯಕ, ಕೈ ಉತ್ಪನ್ನಗಳನ್ನು ಉಳಿಸಿಕೊಳ್ಳುವುದರ ಮೂಲಕ ನಮ್ಮ ಧರ್ಮವನ್ನು ಸಂರಕ್ಷಿಸೋಣ. ಕಾಯಕವೇ ಅಗ್ನಿಪ್ರಳಯವನ್ನು ದೂರಗೊಳಿಸಿ ನಮ್ಮ ಮನಸ್ಸು ಹಗುರಗೊಳಿಸಿ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬಲ್ಲುದು ಎಂದರು.
ಕುಲಾಲ ಸಂಘದ ಅಧ್ಯಕ್ಷರಾದ ಪುಂಡರಿಕಾಕ್ಷ ಅವರು ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ಬಗ್ಗೆ ಸ್ವಾತಂತ್ರ್ಯ ಹೋರಾಟ ಹಾಗೂ ಭೂಸುದಾರಣೆಯ ಕಾಲಘಟ್ಟದಲ್ಲಿ ಅವರ ಸಮಾಜಕ್ಕೆ ಅವರ ಕೊಡುಗೆಗಳ ಬಗ್ಗೆ ನೆನಪುಗಳನ್ನು ಹಂಚಿಕೊಂಡರು.
ಕುಂಬಾರಿಕೆ ಗುಡಿಕೈಗಾರಿಕೆ ಸಂಘದ ಸಿಒ ಜನಾರ್ದನ ಕುಲಾಲ್ ಅವರು ಕುಂಬಾರಿಕೆ ವೃತ್ತಿ ಮತ್ತು ಸವಾಲುಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ಸಿದ್ದನಗೌಡ ಪಾಟೀಲ, ಅಮ್ಮೆಂಬಳ ಬಾಳಪ್ಪ ಅವರ ಸೋದರಳಿಯ ರವೀಂದ್ರ ನಾಥ, ಕುಲಾಲ ಸಂಘದ ಪ್ರದಾನ ಕಾರ್ಯದರ್ಶಿ ಸದಾನಂದ, ಪ್ರೊ.ಸಬಿಹಾ ಮೊದಲಾದವರು ಉಪಸ್ಥಿತರಿದ್ದರು.
ಆಕೃತಿ ಪ್ರಕಾಶನ್ ಕಲ್ಲೂರು ನಾಗೇಶ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಾದ ಮಣಿನಾಲ್ಕೂರು ಅವರಿಂದ ಕತ್ತಲಹಾಡು ಗಾನಾಮೃತ ನಡೆಯಿತು.







