ಫಾತಿಮಾ ರಲಿಯಾಗೆ ಅವ್ವ ಪ್ರಶಸ್ತಿ

ಫಾತಿಮಾ ರಲಿಯಾ
ಮಂಗಳೂರು, ಡಿ.8: ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು ದಿ. ನರಸಯ್ಯ ಅವರ ಸ್ಮರಣಾರ್ಥ ಕೊಡಮಾಡುವ ‘ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2023’ಗೆ ಫಾತಿಮಾ ರಲಿಯಾ ಆಯ್ಕೆಯಾಗಿದ್ದಾರೆ.
ಅಹರ್ನಿಶಿ ಪ್ರಕಾಶನ ಪ್ರಕಟಿಸಿದ ಫಾತಿಮಾ ರಲಿಯಾ ಅವರ ‘ಕಡಲು ನೋಡಲು ಹೋದವಳು’ ಪ್ರಬಂಧ ಸಂಕಲನಕ್ಕೆ ಈ ವರ್ಷದ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ದೊರಕಿದೆ.
ಫಾತಿಮಾ ರಲಿಯಾ ಅವರಿಗೆ ಲಂಕೇಶ್ ಪ್ರಶಸ್ತಿ, ಮೊಗವೀರ ಸಾಹಿತ್ಯ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಸಮಾಜಮುಖಿ ಕಥಾ ಪ್ರಶಸ್ತಿಯಲ್ಲದೆ ಸುಧಾ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಮತ್ತು ವಿಜಯ ಕರ್ನಾಟಕ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಲಭಿಸಿದೆ.
ಉಳಿದಂತೆ ಸಂತೋಷಕುಮಾರ ಮೆಹೆಂದಳೆ ಅವರ (ವೈಜಯಂತಿಪುರ -ಕಾದಂಬರಿ), ಚೈತ್ರಾ ಶಿವಯೋಗಿಮಠ ಅವರ (ಪೆಟ್ರಿಕೋರ್-ಕವನ ಸಂಕಲನ), ಗಾಯತ್ರಿರಾಜ್ ಅವರ (ಟ್ರಾಯ್-ಕಾದಂಬರಿ), ಮುನವ್ವರ್ ಜೋಗಿಬೆಟ್ಟು ಅವರ (ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್-ಕಥಾಸಂಕಲನ) ಕೃತಿಗಳು ಈ ವರ್ಷದ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾಗಿವೆ. ಲೇಖಕ, ವಿಮರ್ಶಕ ಮಹೇಶ ಅರಬಳ್ಳಿ ತೀರ್ಪುಗಾರರಾಗಿ ಸಹಕರಿಸಿದ್ದರು. ಐದು ಕೃತಿಯ ಲೇಖಕರಿಗೆ 2024ರ ಜನೆವರಿ ತಿಂಗಳಲ್ಲಿ ನಡೆಯುವ ಅವ್ವ ವಾರ್ಷಿಕೋತ್ಸವದಲ್ಲಿ ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.







