ಮತದಾರರ ನೋಂದಣಿ: ವೀಕ್ಷಕರಿಂದ ಪರಿಶೀಲನೆ

ಮಂಗಳೂರು, ಡಿ.8: ಮತದಾರರ ಪಟ್ಟಿ ಸೇರ್ಪಡೆ ಅಭಿಯಾನದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಗೆ ಚುನಾವಣಾ ಆಯೋಗದ ವೀಕ್ಷಕರಾಗಿರುವ ನೋಂದಣಿ ಇಲಾಖೆಯ ಮಹಾನಿರೀಕ್ಷಕಿ ಡಾ.ಬಿ.ಆರ್. ಮಮತಾ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತದಾರರ ಪಟ್ಟಿ ಸೇರ್ಪಡೆ, ಯುವ ಮತದಾರರ ನೋಂದಣಿ, ಮೃತಪಟ್ಟವರ ಹೆಸರು ತೆಗೆದುಹಾಕಲು ಕೈಗೊಂಡ ಕ್ರಮಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದರು.
ಬಳಿಕ ವೀಕ್ಷಕರು 9 ಮತಗಟ್ಟೆಗಳನ್ನು ಹೊಂದಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕೋಡಿಕಲ್ ಸರಕಾರಿ ಶಾಲೆ ಹಾಗೂ 11 ಮತಗಟ್ಟೆಗಳಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಪಿತಾನಿಯೋ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಬಿಎಲ್ಒ ಅವರೊಂದಿಗೆ ಸಮಾಲೋಚನೆ ನಡೆಸಿದ ಅವರು ಮತದಾರರ ಪಟ್ಟಿಗೆ ಸೇರ್ಪಡೆ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಮತದಾರರ ನೋಂದಣಿ ಪ್ರಕ್ರಿಯೆಗಳ ಪ್ರಗತಿಗೆ ಸಂತಸ ವ್ಯಕ್ತಪಡಿಸಿದ ವೀಕ್ಷಕರು ಯುವ ಮತದಾರರ ನೋಂದಣಿಗೆ ಕಾಲೇಜುಗಳ ಮೂಲಕ ಇನ್ನಷ್ಟು ಅಭಿಯಾನ ನಡೆಸುವಂತೆ ಸೂಚಿಸಿದರು.
ಅಲ್ಲದೆ ವೀಕ್ಷಕರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮತದಾರರ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭ ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ನಗರಪಾಲಿಕೆ ಉಪ ಆಯುಕ್ತ ರೇಖಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







