ದೇವರೊಂದಿಗೆ ಬದುಕಲು ಕಲಿಯೋಣ: ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ದಾನ

ಮಂಗಳೂರು : ದೇವರು ಜಗತ್ತಿನಲ್ಲಿ ಜನಸಾಮಾನ್ಯರಂತೆ ಜೀವಿಸಿದರು. ನಮಗಾಗಿ ತಮ್ಮ ಅಮೂಲ್ಯವಾದ ಜೀವವನ್ನು ತ್ಯಾಗ ಮಾಡಿದರು. ಸದಾಕಾಲ ನಮಗಾಗಿ ಪ್ರಾರ್ಥಿಸಿದರು. ಹಾಗಾಗಿ ನಾವಿಂದು ದೇವರೊಂದಿಗೆ ಬದುಕಲು ಕಲಿಯ ಬೇಕು ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ ಹೇಳಿದರು.
ನಗರದ ರೊಸಾರಿಯೋ ಕೆಥೆಡ್ರಲ್ನಲ್ಲಿ ರವಿವಾರ ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು.
ದೇವರು ನೀಡಿದ ಉದಾತ್ತ ವಿಚಾರಗಳಾದ ಎಲ್ಲರನ್ನೂ ಪ್ರೀತಿಸುವ, ಸಹಕಾರ, ತಾಳ್ಮೆ, ಕುಟುಂಬ ವ್ಯವಸ್ಥೆಯಲ್ಲಿ ಅನ್ಯೋನ್ಯತೆ, ಕ್ಷಮೆ, ವಿನಯತೆಯಂತಹ ವಿಚಾರಗಳನ್ನು ಮೈಗೂಡಿಸಿಕೊಂಡು ದೇವರೊಂದಿಗೆ ಬದುಕು ಸವಿಸಲು ಮುಂದಾಗಬೇಕು. ಗೋದಲಿಯಲ್ಲಿ ಶ್ರೀಸಾಮಾನ್ಯರಂತೆ ಹುಟ್ಟಿದ ಯೇಸು ಜಗತ್ತಿನಲ್ಲಿ ತನ್ನ ಸರಳತೆಯ ಮೂಲಕ ಪ್ರೀತಿ, ಶಾಂತಿ, ನೆಮ್ಮದಿ ಹಾಗೂ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಳ್ಳಲು ಸೂಚಿಸಿದ್ದರು ಎಂದರು.
ಈ ಸಂದರ್ಭ ರೊಸಾರಿಯೋ ಕೆಥೆಡ್ರಲ್ನ ಪ್ರಧಾನ ಧರ್ಮಗುರು ಫಾ. ಆಲ್ಫ್ರೆಡ್ ಪಿಂಟೋ ಹಾಗೂ ಆಸುಪಾಸಿನ ಚರ್ಚ್ಗಳ ಧರ್ಮಗುರುಗಳು ಪಾಲ್ಗೊಂಡಿದ್ದರು.
ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್
ಯೇಸು ಕ್ರಿಸ್ತರು ಡಿ.24ರ ರಾತ್ರಿ ಗೋದಲಿಯಲ್ಲಿ ಹುಟ್ಟಿದರು ಎಂಬ ನಂಬಿಕೆಯ ಪ್ರತೀಕವಾಗಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಎಲ್ಲಾ ಚರ್ಚ್ಗಳಲ್ಲಿ ರವಿವಾರ ವಿಶೇಷ ಬಲಿಪೂಜೆ ನಡೆಯಿತು.
ನಗರದ ಪ್ರಮುಖ ಚರ್ಚ್ಗಳಾದ ರೊಸಾರಿಯೋ ಕೆಥೆಡ್ರಲ್, ಮಿಲಾಗ್ರಿಸ್, ಲೇಡಿಹಿಲ್, ಅಶೋಕನಗರ, ಕೂಳೂರು, ಬೆಂದೂರ್ ಮತ್ತಿತರ ಚರ್ಚ್ಗಳಲ್ಲಿ ಭಕ್ತರು ಬಲಿಪೂಜೆಯಲ್ಲಿ ಸಂಭ್ರಮದಿಂದ ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.
ನಗರದ ಮಿಲಾಗ್ರಿಸ್ ಚರ್ಚ್ನಲ್ಲಿ ಫಾ. ಬೊನವೆಂಚರ್ ನಜರೇತ್, ಉರ್ವ ಲೇಡಿಹಿಲ್ ಚರ್ಚ್ನಲ್ಲಿ ಫಾ. ಬೆಂಜಮಿನ್ ಪಿಂಟೋ, ಅಶೋಕನಗರದ ಸಂತ ಡೊಮಿನಿಕ್ ಚರ್ಚ್ನಲ್ಲಿ ಫಾ. ಡೇನಿಯಲ್ ಸಂಪತ್ ವೇಗಸ್, ಕೂಳೂರು ಚರ್ಚ್ನಲ್ಲಿ ಫಾ. ವಿಜಯ ವಿಕ್ಟರ್ ಲೋಬೋ ಅವರು ಕ್ರಿಸ್ಮಸ್ ಸಂಭ್ರಮದ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತಕ್ಕೆ ಒಳಪಟ್ಟ ಚರ್ಚ್ಗಳಲ್ಲಿ ಸಂಜೆ ಹೊತ್ತು ಕ್ರಿಸ್ಮಸ್ ಕ್ಯಾರೆಲ್ಸ್, ಕ್ರಿಸ್ಮಸ್ ಬಲಿಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹಬ್ಬದ ಸಂಭ್ರಮದಲ್ಲಿ ಪರಸ್ಪರ ಶುಭಾಶಯ ಕೋರುವ ಸಿಹಿತಿನಿಸುಗಳು (ಕುಸ್ವಾರ್), ಕೇಕ್ಗಳನ್ನು ನೀಡುವ ದೃಶ್ಯಗಳು ಎಲ್ಲೆಡೆ ಕಂಡುಬಂತು. ಚರ್ಚ್ಗಳಲ್ಲಿ ಬಲಿಪೂಜೆಯ ಜತೆಗೆ ಕೇಕ್ಗಳನ್ನು ನೀಡುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಾಯಿತು.
ಕೆಲವು ವರ್ಷಗಳ ಬಳಿಕ ಕ್ರೈಸ್ತರು ರವಿವಾರ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು. ರವಿವಾರದ ವಾಡಿಕೆ ಪೂಜೆಗಳ ಜೊತೆಗೆ ಸಂಜೆ ಕ್ರಿಸ್ಮಸ್ ಹಬ್ಬದ ಪೂಜೆಯಲ್ಲಿ ಕ್ರೈಸ್ತರು ಭಾಗವಹಿಸಿದರು. ಪೂಜೆಯ ಮೊದಲು ಕ್ರಿಸ್ಮಸ್ ಹಾಡುಗಳ ಕ್ಯಾರೆಲ್ಸ್ಗಳು ಸಾಗಿತು. ಯೇಸುವಿನ ಜನನವನ್ನು ನೆನಪಿಸುವ ಹಾಡುಗಳನ್ನು ಮಧುರ ಕಂಠಗಳಲ್ಲಿ ಭಕ್ತರು ಹಾಡುವ ಮೂಲಕ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗನ್ನು ನೀಡಿದರು. ಬಲಿಪೂಜೆಯ ಬಳಿಕ ಬಹುತೇಕ ಚರ್ಚ್ಗಳಲ್ಲಿ ಕ್ರಿಸ್ಮಸ್ ಹಬ್ಬದ ಮನೋರಂಜನಾ ಕಾರ್ಯಕ್ರಮಗಳು, ಸಾಂತಾಕ್ಲಾಸ್ನ ಮಾತುಗಳು, ಸಿಹಿ ತಿನಿಸುಗಳನ್ನು ಹಂಚಿಕೊಳ್ಳುವ ಮೂಲಕ ಹಬ್ಬದ ವಾತಾವರಣ ಮನೆಮಾಡಿತ್ತು.
*ಡಿ.25ರಂದು ತಣ್ಣೀರುಬಾವಿಯ ಚರ್ಚ್ನಲ್ಲಿ ಮಂಗಳೂರು ಬಿಷಪ್ ವಿಶೇಷ ಬಲಿಪೂಜೆ ನೆರವೇರಿಸಲಿದ್ದಾರೆ. ಅಲ್ಲದೆ ಡಿ.25ರಂದು ಕರಾವಳಿಯ ಚರ್ಚ್ಗಳಲ್ಲಿ ಒಂದಕ್ಕಿಂತ ಹೆಚ್ಚು ವಿಶೇಷ ಪೂಜೆಗಳು ಸಾಗಲಿದೆ. ಜೊತೆಗೆ ಕ್ರಿಸ್ಮಸ್ ಈವ್ ಕಾರ್ಯಕ್ರಮಗಳು ಕೆಲವು ಚರ್ಚ್ಗಳಲ್ಲಿ ನಡೆಯಲಿದ್ದು, ಕ್ರೈಸ್ತರು ಆಯಾ ಕುಟುಂಬದ ಹಿರಿಯರ ಮನೆಗೆ ತೆರಳಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ. ಹಬ್ಬದ ಪ್ರಯುಕ್ತ ಕುಸ್ವಾರ್ಗಳನ್ನು ಕಷ್ಟದಲ್ಲಿರುವ ಜನರಿಗೆ ಹಂಚುವ ಕೆಲಸವನ್ನು ಕೂಡ ಮಾಡಲಿದ್ದಾರೆ.







