ಹೋರಾಟಗಾರರ ಮೇಲೆಯೇ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು: ಪೊಲೀಸ್ ಇಲಾಖೆಯ ‘ನಡೆ’ ವಿರುದ್ಧ ವ್ಯಾಪಕ ಖಂಡನೆ
ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿರುದ್ಧ ಪ್ರತಿಭಟನೆ

ಮಂಗಳೂರು: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಉಳ್ಳಾಲ ತಾಲೂಕು ಡಿವೈಎಫ್ಐ ಸಮಿತಿಯು ಶುಕ್ರವಾರ ತೊಕ್ಕೊಟ್ಟಿನಲ್ಲು ಪ್ರತಿಭಟನೆ ನಡೆಸಿದ ಡಿವೈಎಫ್ಐ ಮುಖಂಡರು ಮತ್ತು ಸಮಾನ ಮನಸ್ಕ ಹೋರಾಟಗಾರರ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಇಲಾಖೆಯ ಈ ಅಚ್ಚರಿಯ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ರಾಜ್ಯದಲ್ಲಿರುವುದು ಜಾತ್ಯತೀತ ಪಕ್ಷದ ಆಡಳಿತವೋ ಅಥವಾ ಮತೀಯವಾದಿ ಪಕ್ಷದ ಆಡಳಿತವೋ ಎಂದು ಪ್ರಶ್ನಿಸಿದ್ದಾರೆ.
ನ್ಯಾಯ ಕೇಳಿ ಪ್ರತಿಭಟನೆ ನಡೆಸಿದವರ ಮೇಲೆಯೇ ಉಳ್ಳಾಲ ಪೋಲೀಸರು ಪ್ರಕರಣ ದಾಖಲಿಸಿದ ಕ್ರಮ ಖಂಡನೀಯ. ಪೊಲೀಸರ ಈ ಕ್ರಮದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಎಚ್ಚರಿಸಿದೆ.
ರಾಜ್ಯದ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವ, ಗುಂಪು ಘರ್ಷಣೆಗೆ ಎಡೆಮಾಡಿಕೊಡುವ, ಮತೀಯ ಕಲಹಗಳನ್ನು ಸೃಷ್ಟಿಸುವಂತಹ ಹೇಳಿಕೆಗಳನ್ನು, ಭಾಷಣಗಳನ್ನು ಬಹಿರಂಗವಾಗಿ ಆಡುವ ಕೋಮುವಾದಿ ಕಲ್ಲಡ್ಕ ಪ್ರಭಾಕರ್ ಭಟ್ನಂತಹ ಆರೆಸ್ಸೆಸ್ ಮುಖಂಡರು ಮತ್ತವರ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುವ ಪೊಲೀಸ್ ಇಲಾಖೆಯು ಜಾತ್ಯತೀತ ಮೌಲ್ಯಗಳನ್ನು ಉಳಿಸುವ, ದೇಶದ ಸಂವಿಧಾನದ ಆಶಯಗಳನ್ನು ರಕ್ಷಿಸುವ, ನೆಲದ ಕಾನೂನುಗಳಿಗೆ ಗೌರವ ಕೊಡುವ ಜನಪರ ಸಂಘಟನೆಗಳ ವಿರುದ್ಧ ಎಫ್ಐಆರ್ ದಾಖಲಿಸುವುದು, ಪ್ರತಿಭಟಿಸಲು ಅವಕಾಶ ನಿರಾಕರಿ ಸುವುದು ಎಷ್ಟು ಸರಿ ಈ ಬಗ್ಗೆ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಉತ್ತರಿಸಬೇಕು ಎಂದು ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಶ್ನಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ಟರ ದ್ವೇಷ ಭಾಷಣದ ಮೇಲೆ ಪ್ರಕರಣ ದಾಖಲಾದರೂ ಬಂಧಿಸಲು ಅಸಾಧ್ಯವಾದ ಸರಕಾರದ ನಡೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ದ.ಕ. ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯದಂತೆ ನಿರ್ಬಂಧ ಹೇರಿರೋದು ಯಾವ ಕಾರಣಕ್ಕಾಗಿ ಎಂದು ಜಿಲ್ಲಾಡಳಿತ ಉತ್ತರಿಸಬೇಕು. ಪ್ರತಿಭಟಿಸುವುದು ದೇಶದ ಸಂವಿಧಾನಿಕ ಹಕ್ಕು. ಪ್ರತಿಭಟನೆಯಲ್ಲಿ ಧ್ವನಿವರ್ಧಕ ಬಳಸುವುದಕ್ಕೆ ಪೊಲೀಸ್ ಇಲಾಖೆಯ ಅನುಮತಿ ಬೇಕೇ ವಿನಃ ಪ್ರತಿಭಟನೆಗಳಿಗಲ್ಲ. ಡಿವೈಎಫ್ಐ ನಡೆಸಿದ ಪ್ರತಿಭಟನೆಯ ಬಗ್ಗೆ ಪೊಲೀಸರ ಗಮನಕ್ಕೆ ತರಲಾಗಿದೆ. ಆದರೂ ಪೊಲೀಸ್ ಇಲಾಖೆಯು ಡಿವೈಎಫ್ಐ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಮಾನ ಮರ್ಯಾದೆ ಅನ್ನೋದು ಇದೆಯೇ. ತನ್ನ ಭಾಷಣದ ಮೂಲಕ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುವ ಕೋಮುವಾದಿ ಕಲ್ಲಡ್ಕ ಪ್ರಭಾಕರ ಭಟ್ಟನ್ನು ಬಂಧಿಸಲು ಸಾಧ್ಯವಾಗದ ಕಾಂಗ್ರೆಸ್ ಸರಕಾರದಿಂದ ಇನ್ನೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿ ಮತೀಯ ರಾಜಕಾರಣದಿಂದ ಬೇಸತ್ತ ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂಬುದನ್ನು ಸಿದ್ದರಾಮಯ್ಯ ಮರೆಯಬಾರದು. ರಾಜ್ಯ ಸರಕಾರದ ಈ ರೀತಿಯ ಜನವಿರೋಧಿ ಆಡಳಿತದ ವಿರುದ್ಧ ಹಾಗೂ ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರ ನಡೆಯ ವಿರುದ್ಧ ಹೋರಾಟಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.







