ಬಂಟ್ವಾಳ: ಕಳ್ಳತನ ಪ್ರಕರಣ; ಆರೋಪಿ ಬಂಧನ

ಬಂಟ್ವಾಳ : ಬಿ.ಸಿ.ರೋಡಿನ ಹೃಯಭಾಗದ ಹೊಟೇಲ್ ಸಹಿತ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಬೆಳ್ತಂಗಡಿ ಪಡಂಗಡಿ ನಿವಾಸಿ ಹಮೀದ್ ಯಾನೆ, ಕುಂಞಿಮೋನು ಯಾನೆ ಜಾಫರ್ ಬಂಧಿತ ಆರೋಪಿ.
ಎರಡು ವಾರಗಳ ಹಿಂದೆ ಬಿ.ಸಿ.ರೋಡಿನ ಅನಿಯಾ ದರ್ಬಾರ್ ಹಾಗೂ ಇಲ್ಲಿನ ಕೆಲ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ರೂ ನಗದು ಕಳವು ಮಾಡಲಾಗಿತ್ತು. ಈ ಬಗ್ಗೆ ಹೊಟೇಲ್ ಅನಿಯಾ ದರ್ಬಾರ್ ಮಾಲಕ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಳವು ಮಾಡುವ ದೃಶ್ಯಗಳು ಹೊಟೇಲ್ ನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿತ್ತು ಇದರ ಆಧಾರದ ಮೇಲೆ ಪೊಲೀಸ್ ತಂಡ ಬಂಧನಕ್ಕೆ ಕಾರ್ಯತಂತ್ರ ಹೆಣೆದಿದ್ದರು.
ಹಮೀದ್ ಮಂಗಳೂರಿನಿಂದ ಪ್ರಯಾಣ ಬೆಳೆಸುತ್ತಿದ್ದ ವೇಳೆ ಬಂಟ್ವಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈತ ಹಲವು ಕಳವು ಪ್ರಕರಣದ ಆರೋಪಿಯಾಗಿದ್ದು, ವಿವಿಧ ಠಾಣೆಯಲ್ಲಿ ಈತನ ಮೇಲೆ ಕಳವು ಪ್ರಕರಣ ದಾಖಲಾಗಿದೆ, ಜೊತೆಗೆ ಈತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣಕ್ಕಾಗಿ ವಿವಿಧ ಠಾಣೆಗಳಲ್ಲಿ ವಾರೆಂಟ್ ಆರೋಪಿ ಕೂಡ ಆಗಿರುವುದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಹೇಳಲಾಗಿದೆ.
ಇದೀಗ ಈತನನ್ನು ಬಂಟ್ವಾಳ ಡಿ.ವೈಎಸ್.ಪಿ. ವಿಜಯಪ್ರಸಾದ್ ಅವರ ನಿರ್ದೇಶನದಂತೆ, ಬಂಟ್ವಾಳ ನಗರ ಠಾಣಾ ಪೊಲೀಸ್ ನಿರೀಕ್ಷಕ ಆನಂತ ಪದ್ಮನಾಭ ಅವರ ನೇತ್ರತ್ವದಲ್ಲಿ ಠಾಣಾಧಿಕಾರಿಗಳಾದ ರಾಮಕೃಷ್ಣ ಮತ್ತು ಕಲೈಮಾರ್ ಅವರ ತಂಡದಲ್ಲಿ ಸಿಬ್ಬಂದಿಗಳಾದ ಇರ್ಷಾದ್. ಪಿ ಮತ್ತು ರಾಜೇಶ್ ,ಅವರು ಕಾರ್ಯಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.







