ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಹಿ ಸಂಗ್ರಹ ಚಳುವಳಿ

ಮಂಗಳೂರು, ಜ.12: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು, ಜನಪರ ಪರ್ಯಾಯ ನೀತಿ ಗಳನ್ನು ಜಾರಿಗೊಳಿಸಬೇಕು ಹಾಗೂ ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ‘ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ದೇಶಾದ್ಯಂತ ವ್ಯಾಪಕ ಪ್ರಚಾರಾಂದೋಲನ ನಡೆಸಬೇಕೆಂಬ ಸಿಐಟಿಯು ಅಖಿಲ ಭಾರತ ಸಮಿತಿಯ ಕರೆಯಂತೆ ಸ್ವಾಮಿ ವಿವೇಕಾನಂದ ಜಯಂತಿ ದಿನವಾದ ಇಂದು ಮಂಗಳೂರು, ತೊಕ್ಕೊಟ್ಟು, ಗುರುಪುರ ಕೈಕಂಬ, ಬೆಳ್ತಂಗಡಿಯಲ್ಲಿ ಸಹಿ ಸಂಗ್ರಹ ಚಳುವಳಿಗೆ ಚಾಲನೆ ನೀಡಲಾಯಿತು.
ಮಂಗಳೂರಿನಲ್ಲಿ ಸಹಿ ಸಂಗ್ರಹ ಚಳುವಳಿಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕೇಂದ್ರದ ನರೇಂದ್ರ ಮೋದಿ ಸರಕಾರವು ಕಾರ್ಪೊರೇಟ್ ಕೋಮುವಾದಿಗಳ ಅಕ್ರಮ ಕೂಟವಾಗಿದೆ. ತನ್ನ ಜನವಿರೋಧಿ ನೀತಿಗಳಿಂದ ದುಡಿಯುವ ವರ್ಗ ಹಾಗೂ ಜನಸಾಮಾನ್ಯರ ಬದುಕನ್ನು ನಾಶಗೊಳಿಸಿದೆ ಎಂದು ಆರೋಪಿಸಿದರು.
ಈ ಸಂದರ್ಭ ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಮುಹಮ್ಮದ್ ಮುಸ್ತಫಾ, ಕಾರ್ಮಿಕ ಮುಖಂಡರಾದ ರಿಯಾಝ್, ಗುಡ್ಡಪ್ಪಮತ್ತಿತರರು ಉಪಸ್ಥಿತರಿದ್ದರು.
ತೊಕ್ಕೋಟುನಲ್ಲಿ ಜರುಗಿದ ಸಹಿಸಂಗ್ರಹ ಚಳುವಳಿಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಗುರುಪುರ ಕೈಕಂಬ ದಲ್ಲಿ ರೈತ ನಾಯಕರಾದ ಸದಾಶಿವದಾಸ್, ಬೆಳ್ತಂಗಡಿಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ.ಎಂ.ಭಟ್ ಉದ್ಘಾಟಿಸಿ ಮಾತನಾಡಿದರು.
ತೊಕ್ಕೊಟ್ಟಿನಲ್ಲಿ ಜಯಂತ ನಾಯಕ್, ಸುಂದರ ಕುಂಪಲ, ರೋಹಿದಾಸ್, ಪದ್ಮಾವತಿ ಶೆಟ್ಟಿ, ಜನಾರ್ದನ ಕುತ್ತಾರ್, ಚಂದ್ರ ಹಾಸ ಪಿಲಾರ್, ಕೈಕಂಬದಲ್ಲಿ ನೋಣಯ್ಯ ಗೌಡ, ವಸಂತಿ ಕುಪ್ಪೆಪದವು, ವಾರಿಜಾ, ಕುಸುಮಾ, ಬೆಳ್ತಂಗಡಿಯಲ್ಲಿ ಜಯರಾಮ ಮಯ್ಯ, ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.







