ಸ್ಮಾರ್ಟ್ ಸಿಟಿ ಲಿಮಿಟೆಡ್ನ ನೇತ್ರಾವತಿ ಜಲಭಿಮುಖ ಯೋಜನೆ: ಕುಂದುಕೊರತೆ ಸಭೆ ನಡೆಸಲು ಸಿಟಿಝನ್ ಫೋರಂ ಜಸ್ಟಿಸ್ ಆಗ್ರಹ

ಮಂಗಳೂರು: ನೇತ್ರಾವತಿ ಸೇತುವೆಯಿಂದ ಬೋಳಾರ ಸೀಫೇಸ್ವರೆಗಿನ 2.1 ಕಿ.ಮೀ. ಉದ್ದದ ನೇತ್ರಾವತಿ ಜಲಾಭಿ ಮುಖ ಯೋಜನೆ ಬಗೆಗಿನ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯರ ಸಭೆ ನಡೆಸಬೇಕು ಒಂದು ಸಿಟಿಜನ್ ಫೋರಂ ಫೋರ್ ಜಸ್ಟಿಸ್ ಆಗ್ರಹಿಸಿದೆ.
ಪ್ರೆಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅತಾವುಲ್ಲ ರಹ್ಮಾನ್, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಈಗಾಗಲೇ ಹಲವು ರಸ್ತೆಗಳು, ಕಾಲುದಾರಿಗಳು, ಉದನ್ಯಾನವನ, ಕೆರೆ, ಸ್ಮಾರ್ಟ್ ಬಸ್ ನಿಲ್ದಾಣ, ಇ ಶೌಚಾಲಯಗಳನ್ನು ನಿರ್ಮಿಸಿರುವುದು ಅವೈಜ್ಞಾನಿಕವಾಗಿದೆ. ಇದೀಗ 70 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿರುವ ನೇತ್ರಾವತಿ ಜಲಾಭಿಮುಖ ಯೋಜನೆಯ ಕುರಿತಂತೆ ಸ್ಥಳೀಯ ಖಾಸಗಿ ಜಮೀನು, ಬೋಟ್ಯಾರ್ಡ್ಗಳನ್ನು ಹೊಂದಿರುವವರು, ಬಂದರು ಭೂಮಿಯನ್ನು ಲೀಸ್ ಮೇಲೆ ಪಡೆದವರಿಗೆ ಸಮರ್ಪಕ ಮಾಹಿತಿಯನ್ನು ನೀಡದೆ, ಏಕಾಏಕಿ ನೋಟೀಸು ನೀಡಿ ಒಕ್ಕಲೆಬ್ಸಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಈಗಾಗಲೇ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹಾಗಿದ್ದರೂ ಅಭಿವೃದ್ಧಿ ಯೋಜನೆಗೆ ಅಲ್ಲಿನ ಕೆಲ ಬಂದರು ಭೂಮಿಯನ್ನು ಅತಿಕ್ರಮಣ ಮಾಡಿಕೊಂಡವರು ಅಡ್ಡಿ ಪಡಿಸುತ್ತಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾರ್ವಜನಿಕ ವಾಗಿ ಹಬ್ಬಿಸಲಾಗುತ್ತಿದೆ. ಈ ಮೂಲಕ ಅಲ್ಲಿ ಖಾಸಗಿ ಭೂಮಿ ಹೊಂದಿರುವರನ್ನು ಮಾತ್ರವಲ್ಲದೆ, ಹೊಟ್ಟೆಪಾಡಿಗಾಗಿ ಆ ಭೂಮಿಯನ್ನು ಆಶ್ರಯಿಸಿಕೊಂಡಿರುವ ಸುಮಾರು 600ಕ್ಕೂ ಅಧಿಕ ಕಾರ್ಮಿಕರನ್ನು ಹೊರದಬ್ಬುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಈ ಯೋಜನೆಯ ಬಗ್ಗೆ ಜಿಲ್ಲಾಡಳಿತ, ಶಾಸಕರು, ಸಂಸದರು ಹಾಗೂ ಸ್ಥಳೀಯ ಕಾರ್ಪೊರೇಟರ್ಗಳು ಹಾಗೂ ಸಂಬಂಧ ಪಟ್ಟ ಇತರ ಇಲಾಖೆಗಳು ಕೂಡಾ ಸ್ಥಳೀಯ ಸಂಬಂಧಪಟ್ಟವರ ಜತೆ ವಿಚಾರಣೆ, ಚರ್ಚೆ ನಡೆಸಿಲ್ಲ. ಯೋಜನೆ ಆರಂಭಕ್ಕೆ ಮುನ್ನ ಸುಮಾರು ಐದು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಈ ಬಗ್ಗೆ ಚರ್ಚಿಸಿದ್ದು ಬಿಟ್ಟರೆ ಯಾವುದೇ ಸಾರ್ವಜನಿಕ ಸಮಾಲೋಚನೆ ನಡೆದಿಲ್ಲ. ಹಾಗಿದ್ದರೂ ಸುಮಾರು 70 ಕೋಟಿ ರೂ.ಗಳ ಯೋಜನೆಗೆ ವೇಗ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಿದ್ದರೆ ಸ್ಥಳೀಯ ಸಾವಿರಾರು ಜನರ ಬದುಕಿನ ಪ್ರಶ್ನೆಗೆ ಉತ್ತರಿಸುವವರು ಯಾರು ಎಂದು ಅವರು ಪ್ರಶ್ನಿಸಿದರು.
ಈ ಯೋಜನೆ ಅವೈಜ್ಞಾನಿಕವಾಗಿದ್ದು, ಇದು ದೋಣಿ ನಿರ್ಮಾಣ ಮತ್ತು ಮೀನುಗಾರಿಕೆ ಉದ್ಯಮಗಳ ಜೀವನೋಪಾಯ ಮತ್ತು ವ್ಯವಹಾರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಯೋಜನೆ ಆರಂಭಗೊಳ್ಳುವ ಮೊದಲೇ ಲಕ್ಷಾಂತರ ರೂ.ಗಳ ಬ್ಯಾಂಕ್ ಸಾಲದೊಂದಿಗೆ ಕೈಗಾರಿಕೆ ಆರಂಭಿಸಿರುವವರು ಅತಂತ್ರರಾಗಿದ್ದಾರೆ. ಖಾಸಗಿ ಭೂಮಿಯವರು ಯೋಜನೆಯ ಮಾಹಿತಿ ಇಲ್ಲದೆ ಗೊಂದಲದಲ್ಲಿದ್ದಾರೆ. 2024ರ ಮಾರ್ಚ್ವರೆಗೆ ಬಂದರು ಇಲಾಖೆಯ ಭೂಮಿಗೆ ಲೀಸ್ಗೆ ಸಾವಿರಾರು ರೂ. ತೆರಿಗೆ ಕಟ್ಟಿ ಉದ್ಯಮ ನಡೆಸುತ್ತಿದ್ದರೂ, ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಸುಳ್ಳು ಹೇಳಿ ಅವರನ್ನು ಒಕ್ಕಲೆಬ್ಬಿಸಲು ನೋಟೀಸು ಜಾರಿಗೊಳಿಸಿದ್ದಾರೆ ಎಂದವರು ಹೇಳಿದರು.
10 ವರ್ಷದಿಂದ ಬೋಳಾರ ಲೀಎಲ್ ಬಳಿ ಲಕ್ಷಾಂತರ ರೂ. ಹೂಡಿಕೆ ಮಾಡಿ ತಾತ್ಕಾಲಿಕ ಶೆಡ್ನೊಂದಿಗೆ ಮೀನುಗಾರಿಕಾ ದೋಣಿಗಳಿಗೆ ಪೂರಕವಾಗಿ ಮೀನು ಬಲೆ ತಯಾರಿಕಾ ಘಟಕ ನಡೆಸುತ್ತಿದ್ದೇನೆ. ಸುಮಾರು 40 ಮಂದಿ ಕಾರ್ಮಿಕರಿದ್ದಾರೆ. ಹಿಂದೆ ವರ್ಷಕ್ಕೆ 57 ಸಾವಿರ ರೂ. ಬಂದರು ಭೂಮಿಗೆ ಲೀಸ್ ಹಣ ಪಾವತಿಸುತ್ತಿದ್ದರೆ, ಈ ವರ್ಷ ಅದು ಮೂರು ಪಟ್ಟು ಹೆಚ್ಚಿಸಲಾಗಿದ್ದು, 1.27 ಲಕ್ಷ ರೂ. ಪಾವತಿಸಲಾಗಿದೆ. ಹಾಗಿದ್ದರೂ ನಾವು ಅಕ್ರಮವಾಗಿ ಇರುವುದು, ಜಾಗ ಬಿಟ್ಟು ಹೋಗಿ ಎಂದು ನೋಟೀಸು ನೀಡಿರುವುದು ಯಾವ ಆಧಾರದಲ್ಲಿ. ಇದು ಬಡವರ ಹೊಟ್ಟೆ ಮೇಲೆ ಹೊಡೆಯುವುದಲ್ಲವೇ ಎಂದು ಫಿಶ್ ನೆಟ್ ಘಟಕದ ಸೂರಜ್ ಅಸಮಾಧಾನ ವ್ಯಕ್ತಪಡಿಸಿದರು.
ಆರಂಭದಲ್ಲಿ ನಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದರು. ನಾವು ಯೋಜನೆಯ ನಕ್ಷೆ, ಮಾಹಿತಿ ಕೇಳಿದರೆ ನಿರಾಕರಿಸುತ್ತಾರೆ. ಈ ದೋಣಿ ನಿರ್ಮಾಣ ಯಾರ್ಡ್ಗಳು, ಮೀನು ಬಲೆ ತಯಾರಿಕಾ ಘಟಕಗಲು ಮುಚ್ಚಿದರೆ ಸಾವಿರಾರು ಕಾರ್ಮಿಕರು ಬೀದಿಪಾಲಾಗಲಿದ್ದಾರೆ. ಅವರಿಗೆ ಮೊದಲು ಪರಿಹಾರದ ಕ್ರಮ ಸೂಚಿಸಲಿ ಎಂದವರು ಒತ್ತಾಯಿಸಿದರು.
ಮಂಗಳೂರು ಅಭಿವೃದ್ಧಿಯಾಗುವುದಕ್ಕೆ ನಾವು ವಿರೋಧವಿಲ್ಲ. ನೇತ್ರಾವತಿ ನದಿ ಬದಿ ಜಲಾಭಿಮುಖ ಯೋಜನೆ ಮಾಡು ವುದಕ್ಕೂ ನಮ್ಮ ಅಭ್ಯಂತರವಿಲ್ಲ. ಆದರೆ ಆ ಯೋಜನೆ ಕಾರ್ಯಸಾಧುವೇ ಎಂಬ ಬಗ್ಗೆ ಚರ್ಚೆಯಾಗಿಲ್ಲ. ಸಮುದ್ರದ ಏರಿಳಿತದಿಂದಾಗಿ ಅಲ್ಲಿ ಮಳೆಗಾಲದಲ್ಲಿ ಪ್ರವಾಹ ಸಾಮಾನ್ಯ. ಸಾಮಾನ್ಯವಾಗಿಯೂ ನೀರಿನ ಏರಿಳಿತದ ವೇಳೆ ನಮ್ಮ ಭೂಮಿಗೆ ಮೃತಪಟ್ಟ ಜಾನುವಾರುಗಳ ಕೊಳೆತ ದೇಹಗಳು ಬಂದು ಬೀಳುತ್ತವೆ. ಹಾಗಿರವಾಗ ಆ ಹಾದಿಯಲ್ಲಿ ವಾಕಿಂಗ್, ಜಾಗಿಂಗ್ ಟ್ರ್ಯಾಕ್ ಮಾಡುವುದು ಸುರಕ್ಷಿತವೇ? ಮಾತ್ರವಲ್ಲದೆ ಯೋಜನೆಗೆ ಸಂಪರ್ಕ ರಸ್ತೆಯನ್ನೂ ಇನ್ನೂ ನಿರ್ಧರಿಸ ಲಾಗಿಲ್ಲ. ಯಾವುದೇ ಸಮಗ್ರ ಚಿಂತನೆ, ಮಾಹಿತಿ ಇಲ್ಲದೆ ಯೋಜನೆ ಮಾಡುವ ಮೂಲಕ ಜನರ ತೆರಿಗೆ ಹಣವನ್ನು ವ್ಯಯಿಸುವ ಮುನ್ನ ಆ ಬಗ್ಗೆ ಕ್ರಮ ವಹಿಸುವುದು ಅಗತ್ಯ ಎಂದು ಆ ಭಾಗದಲ್ಲಿ ಖಾಸಗಿ ಜಮೀನು ಹಾಗೂ ಹೆಂಚಿನ ಕಾರ್ಖಾನೆ ಹೊಂದಿರುವ ಅನಿತಾ ಮಥಾಯಸ್ ಆಗ್ರಹಿಸಿದರು.
ಕೊರೋನದಿಂದಾಗಿ ತೀರಾ ಕಂಗೆಟ್ಟಿದ್ದ ವ್ಯವಹಾರಸ್ಥರು ಸದ್ಯ ಚೇತರಿಸಿಕೊಂಡು ಬ್ಯಾಂಕ್ ಸಾಲ ಮಾಡಿ ಉದ್ಯಮ ನಡೆಸುತ್ತಿರುವಾಗ ಇಂತಹ ಅವೈಜ್ಞಾನಿಕ ಯೋಜನೆಯಿಂದ ಕಾರ್ಮಿಕರ ಜತೆ ಉದ್ದಿಮೆದಾರರೂ ಬೀದಿ ಪಾಲಾಗಲಿದ್ದಾರೆ ಎಂದು ಯೋಜನೆಗೊಳಪಡುವ ಬಾವಾ ಬೋಟ್ಯಾರ್ಡ್ನ ಶೇಖ್ ಅಬ್ದುಲ್ಲಾ ಆತಂಕ ವ್ಯಕ್ತಪಡಿಸಿದರು.
ನಮ್ಮ ಖಾಸಗಿ ಭೂಮಿಯೇ ಸಾಕಷ್ಟು ನೀರು ಪಾಲಾಗಿದೆ. ಹಾಗಿರುವಾಗ ನಾವು ಬಂದರು ಇಲಾಖೆಯ ಭೂಮಿಯನ್ನು ಅತಿಕ್ರಮಿಸಿದ್ದೇವೆ ಎಂಬ ಆರೋಪ ಮಾಡುವುದು ಎಷ್ಟು ಸರಿ. ಈವರೆಗೆ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ನಡೆಸಿಲ್ಲ. ಸೂಚನೆ ನೀಡಿಲ್ಲ. ಸಾರ್ವಜನಿಕ ವಿಚಾರಣ ಎನಡೆಸಿಲ್ಲ. ಯಾವುದೇ ರೇಖಾಚಿತ್ರ ಯೋಜನೆಯ ಮಾಹಿತಿ ಒದಗಿಸಿಲ್ಲ. ಹಾಗಿದ್ದರೂ ಈಗಾಗಲೇ ನೇತ್ರಾವತಿ ನದಿ ತೀರದಲ್ಲಿ ಅಕ್ರಮ ಬುಲ್ಡೋಜಿಂಗ್ ಮಾಡಿ ನದಿ ಪರಿಸರ ಹಾಳುಮಾಡಲಾಗಿದೆ. ಕೆಯುಐಡಿಎಪ್ಸಿಯಿಂದ ತಾತ್ವಿಕ ಅನುದಮೋನೆಯ ಷರತ್ತುಗಳನ್ನು ಅನುಸರಿಲಾಗಿಲ್ಲ. ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿ ಉಲ್ಲಂಘನೆ ಮಾಡಲಾಗಿದ್ದು, ಸಿಆರ್ಝೆಡ್ ಮತ್ತು ಪರಿಸರ ಉಲ್ಲಂಘನೆ ಮತ್ತು ಸಿಆರ್ಝೆಡ್ ಅನುಮತಿ ಪಡೆಯಲು ಸುಳ್ಳು ಹೇಳಿಕೆಯನ್ನು ಸ್ಮಾಟ್ಸಿಟಿ ಲಿಮಿಟೆಡ್ ಸಲ್ಲಿಕೆ ಮಾಡಿದೆ ಎಂದು ಆರೋಪಿಸಿದ ಖಾಸಗಿ ಭೂಮಿಯ ಮಾಲಕ ಇಯಾನ್ ಲೋಬೋ, ಜನರ ತೆರಿಗೆ ಹಣದಲ್ಲಿ ಮಾಡುವ ಕೋಟ್ಯಂತರ ರೂ.ಗಳ ಅಭಿವೃದ್ಧಿ ಕಾರ್ಯ ಸುರಕ್ಷಿತ ಜಾಗದಲ್ಲಿ, ಜನಸಾಮಾನ್ಯರಿಗೂ ಯೋಗ್ಯವಾದ ಭಾಗದಲ್ಲಿ ನಡೆಯಲಿ ಎಂದರು.
ಗೋಷ್ಟಿಯಲ್ಲಿ ಕೆ.ಎಂ. ಬೋಟ್ಯಾರ್ಡ್ನ ಮುತ್ತಲಿಬ್, ಖಾಸಗಿ ಭೂಮಿಯ ಮಾಲಕ ಡೆನ್ಜಿಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.







