ಸುಳ್ಯ: ಪೆರಾಜೆ - ಬಿಳಿಯಾರಿನಲ್ಲಿ ಕಾಡಾನೆ ಸಂಚಾರ; ಕಾರಿಗೆ ಹಾನಿ

ಸುಳ್ಯ: ಕಾಡಾನೆಯೊಂದು ಪೆರಾಜೆ ಗ್ರಾಮದಲ್ಲಿ ಸುತ್ತಾಡಿ ಬಳಿಕ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭ ಬಿಳಿಯಾರಿನಲ್ಲಿ ನಿಂತಿದ್ದ ಕಾರಿಗೆ ಹಾನಿ ಮಾಡಿ ತೆರಳಿರುವ ಘಟನೆ ಸೋಮವಾರ ನಡೆದಿದೆ.
ಪೆರಾಜೆಯ ಉದ್ಯಮಿ ಉನೈಸ್ ಪೆರಾಜೆಯವರ ಕಾರಿಗೆ ಹಾನಿ ಮಾಡಿದೆ. ಕಾರಿನ ಚಾಲಕ ಅವಿನಾಶ್ ಗೂನಡ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆ ದಾಳಿ ಮಾಡುತ್ತಿದ್ದ ವೇಳೆ ಅವರು ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತ್ತಿದ್ದರು. ಆ ಸಂದರ್ಭ ಕಾರಿನಲ್ಲಿ ಶಾಲೆಗೆ ಹೋಗುವ ಬಾಲಕ ಇದ್ದು ಅಪಾಯವಿಲ್ಲದೇ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು ಪೆರಾಜೆಯ ದಿವಾಕರ ರೈಯವರ ಗದ್ದೆಗೆ ಬಂದು ಬಳಿಕ ಅಲ್ಲಿಂದ ಬಿಳಿಯಾರು ರಸ್ತೆಗಾಗಿ ಪೂಮಲೆ ಕಾಡಿನತ್ತ ದಾಟಿದೆ. ಪೆರಾಜೆ ಗ್ರಾಮದ ಕಂಡಾಡು, ನಿಡ್ಯಮಲೆ, ಪೀಚೆ, ಮೂಲೆಮಜಲು - ದೇಶಕೋಡಿಯಾಗಿ ಕಾಡಾನೆ ಬಂದಿದೆ. ಮೂಲೆಮಜಲು ಧನಂಜಯ ಎಂಬವರು ಪೆರಾಜೆ ಪೇಟೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾಡಾನೆ ಎದುರಾಗಿ ಬಂದಿದೆ. ತಕ್ಷಣ ಅವರು ಬೈಕನ್ನು ಬಿಟ್ಟು ಓಡಿ ತಪ್ಪಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.





