ಮಂಗಳೂರು : ಖ್ಯಾತ ಮಕ್ಕಳ ತಜ್ಞ ಡಾ. ಯು.ವಿ.ಶೆಣೈ ನಿಧನ

ಮಂಗಳೂರು : ಖ್ಯಾತ ಮಕ್ಕಳ ತಜ್ಞ , ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ಮಕ್ಕಳ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಯು.ವಿ.ಶೆಣೈ (72) ಜನವರಿ 30ರಂದು ಮಂಗಳೂರಿನ ಅಶೋಕ ನಗರದಲ್ಲಿರುವ ನಿವಾಸದಲ್ಲಿ ನಿಧನ ಹೊಂದಿದರು.
ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ನಗರದ ‘ಚೇತನಾ’ ದಿವ್ಯಾಂಗ ಮಕ್ಕಳ ಕೇಂದ್ರದ ಸ್ಥಾಪನೆ ಹಾಗೂ ಅದರ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದ ಅವರು, ಕರ್ನಾಟಕ ಸರಕಾರದ ದಿವ್ಯಾಂಗ ಸಂಸ್ಥೆಯ ಸಲಹೆಗಾರರಾಗಿಯೂ ದುಡಿದಿದ್ದರು.
ಥಾಲಸೀಮಿಯಾ (Thalassumia) ಹಾಗೂ ಹೀಮೋಫೀಲಿಯಾ (Hemophilia) ಸೊಸೈಟಿಯ ಮೂಲಕ ಅಸಂಖ್ಯಾತ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ನೆರವು ನೀಡುವಲ್ಲಿ ಡಾ.ಶೆಣೈ ಯವರ ಕೊಡುಗೆ ಅಪಾರವಾಗಿದೆ. ಎಂಡೋಸಲ್ಫಾನ್ನ ದುಷ್ಪರಿಣಾಮಗಳ ಕುರಿತು ಜನ ಜಾಗೃತಿ ಮೂಡಿಸುವಲ್ಲಿಯೂ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದ್ದ ಅವರಿಗೆ 2020ರಲ್ಲಿ ‘ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ’ ಯೂ ಲಭಿಸಿತ್ತು. ‘ಯೋಗೋದಾ ’ ಸತ್ಸಂಗ ಸೊಸೈಟಿಯ ಮಂಗಳೂರು ಶಾಖೆಯನ್ನು ತಮ್ಮ ಮನೆಯ ಮಹಡಿಯಲ್ಲಿ ಪ್ರಾರಂಭಿಸಿ ಆಧ್ಯಾತ್ಮಿಕ ಜ್ಞಾನ ಪ್ರಸರಣದಲ್ಲೂ ತಮ್ಮದೇ ಆದ ಕೊಡುಗೆ ನೀಡಿದ್ದರು.





