ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ - ಶಾಸಕಿ ಭಾಗೀರಥಿ ಮುರುಳ್ಯ
ಕೊಲ್ಲಮೊಗ್ರದಲ್ಲಿ ಪತ್ರಕರ್ತರ 5ನೇ ಗ್ರಾಮ ವಾಸ್ತವ್ಯ ಉದ್ಘಾಟನೆ

ಸುಳ್ಯ : ಗ್ರಾಮದ ಜನರಿಗೆ ಸರಕಾರಿ ಕಚೇರಿಗಳಿಗೆ ಹೋಗಿ ತಮ್ಮ ಕೆಲಸ ಕಾರ್ಯವನ್ನು ಮಾಡಲು ಕಷ್ಟವಾಗುವ ಇಂತ ದಿನದಲ್ಲಿ ಗ್ರಾಮದವರು ಒಂದೇ ವೇದಿಕೆಯಲ್ಲಿ ಎಲ್ಲ ಅಧಿಕಾರಿಗಳು ಕುರಿತು ಸಮಸ್ಯೆ ಪರಿಹರಿಸುವಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ ಬರೆದಿರುವುದು ಶ್ಲಾಘನೀಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಂಟೀ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
"ಕೊಲ್ಲಮೊಗ್ರ, ಹರಿಹರ ಗ್ರಾಮಗಳು ಗಡಿಪ್ರದೇಶ. ಕಳೆದ ಬಾರಿ ನೆರೆ ಬಂದು ಇಲ್ಲಿನ ಜನರು ತುಂಬಾ ತೊಂದರೆಗೊಳ ಗಾಗಿದ್ದಾರೆ. ಇಲ್ಲಿರುವ ಈ ನೈಜ್ಯ ಸಮಸ್ಯೆಗಳನ್ನು ಅಧಿಕಾರಿಗಳು ಅರಿತು ಪರಿಹಾರ ಒದಗಿಸಬೇಕು. ಜನಸ್ನೇಹಿ ಕೆಲಸ ಗಳು ಆಗಬೇಕು ಎಂದು ಅವರು ಹೇಳಿದರು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಕೊಲ್ಲಮೊಗ್ರಕ್ಕೆ ನಾನು ಬೆಳಗ್ಗೆ ಬರುವಾಗಲೇ ಇಲ್ಲಿಯ ರಸ್ತೆಯ ತಿರುವು ನೋಡಿಕೊಂಡೇ ಈ ಭಾಗದ ಕಷ್ಟಗಳ ಅರಿವಾಗಿದೆ. ಇಲ್ಲಿ ಬಂದಿರುವ ಅರ್ಜಿಗಳಲ್ಲಿ ಶೇ.70 ರಷ್ಟು ಅರ್ಜಿಗಳು ಜಾಗದ ವಿಷಯಕ್ಕೆ ಸಂಬಂಧಿಸಿದ್ದು ಇದೆ. ಭಾಗಶಃ ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ಇದನ್ನು ಆದ್ಯತೆಯಲ್ಲಿ ತೆಗೆದು ಕೊಂಡು ಗಡಿಗುರುತು ಮಾಡಲಾಗುವುದು. ಈ ಕೆಲಸಕ್ಕೆ 4- 5 ತಿಂಗಳು ಅವಧಿ ಬೇಕಾಗಬಹುದು. ಬಳಿಕ ಇಲ್ಲೆ ಬಂದು ತಮಗೆ ತಿಳಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೋವಿ ಲೈಸೆನ್ಸ್ ವರ್ಗಾವಣೆ ಹಿಂದೆ ಇತ್ತು. ಈಗ ಅದಕ್ಕೆ ಅವಕಾಶ ಇಲ್ಲ. ಆದರೆ ಮನೆಯ ಹಿರಿಯರು ತನ್ನ ಹೆಸರಿನ ಲೈಸೆನ್ಸ್ ನ್ನು ನಮಗೆ ಶರಣು ಮಾಡಬೇಕು. ಬಳಿಕ ಅವರ ಮಗನಿಗೆ ಹೊಸ ಲೈಸೆನ್ಸ್ ನೀಡಲು ಅವಕಾಶ ಇದೆ ಎಂದು ಡಿ.ಸಿ.ಯವರು ಹೇಳಿದರು.
ಅಡಿಕೆ ಎಲೆ ಹಳದಿ ರೋಗಕ್ಕೆ ಪರಿಹಾರ ಇಲ್ಲ.ಅದರಿಂದ ಹೊರಗೇ ಬರಬೇಕು. ಪರ್ಯಾಯ ಬೆಳೆ ಬೆಳೆಯಲು ಆದ್ಯತೆ ನೀಡಬೇಕು. ಇದಕ್ಕೆ ಇಲಾಖೆಗಳಿಂದ ಸಹಕಾರ ಪಡೆಯಲು ಅವಕಾಶ ಇದೆ. ಕೃಷಿಕರು ಪ್ರಯೋಜನ ಪಡೆಯಿರಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕಡಮಕಲ್ಲು - ಮಡಿಕೇರಿ ರಸ್ತೆ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮಕ್ಕೆ ಬಸ್ ಇತ್ಯಾಡಿ ಬೇಡಿಕೆಗಳಿಗೂ ಅವರು ಪರಿಹಾರದ ಭರವಸೆ ನೀಡಿದರು.
ಪೋಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಸಿ.ಬಿ., ಪುತ್ತೂರು ಸಹಾಯಕ ಉಪವಿಭಾಗ ಅಧಿಕಾರಿ ಜುಬಿನ್ ಮಹಾಪಾತ್ರ, ಡಿ.ಎಫ್. ಒ. ಆಂಥೋನಿ ಮರಿಯಪ್ಪ, ಸುಳ್ಯ ತಾ.ಪಂ. ಇ.ಒ. ರಾಜಣ್ಣ, ತಹಸೀಲ್ದಾರ್ ಮಂಜುನಾಥ್ ಜಿ, ಹರಿಹರ - ಕೊಲ್ಲ ಮೊಗ್ರ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಷ ಕುಮಾರ್, ಹರಿಹರ ಗ್ರಾ.ಪಂ. ಅಧ್ಯಕ್ಷ ವಿಜಯ ಅಂಗಣ, ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಹಾರಾಷ್ಟ್ರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ರಾಜೇಶ್, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವೇದಿಕೆಯಲ್ಲಿ ಇದ್ದರು.
ಬಂಗ್ಲೆಗುಡ್ಡೆ ಶಾಲಾವಿದ್ಯಾರ್ಥಿಗಳು ಪ್ರಾರ್ಥಿಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ ಹಾಗೂ ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.







