ಸ್ವಾರ್ಥಕ್ಕಾಗಿ ಸಮಾಜವನ್ನು ಛಿದ್ರ ಮಾಡದಿರಿ: ಪ್ರೊ. ಬಿ.ಎ.ವಿವೇಕ ರೈ
2024ನೆ ವರ್ಷದ ಸಂದೇಶ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
![ಸ್ವಾರ್ಥಕ್ಕಾಗಿ ಸಮಾಜವನ್ನು ಛಿದ್ರ ಮಾಡದಿರಿ: ಪ್ರೊ. ಬಿ.ಎ.ವಿವೇಕ ರೈ ಸ್ವಾರ್ಥಕ್ಕಾಗಿ ಸಮಾಜವನ್ನು ಛಿದ್ರ ಮಾಡದಿರಿ: ಪ್ರೊ. ಬಿ.ಎ.ವಿವೇಕ ರೈ](https://www.varthabharati.in/h-upload/2024/02/11/1242855-img5522.webp)
ಮಂಗಳೂರು: ಸಣ್ಣಪುಟ್ಟ ಕಾರಣವನ್ನು ನೆಪವಾಗಿಸಿಕೊಂಡು ಮತ್ತು ಸ್ವಾರ್ಥಕ್ಕಾಗಿ ಯಾರೂ ಯಾವತ್ತೂ ಕೂಡ ಸಮಾಜವನ್ನು ಛಿದ್ರ ಮಾಡಬೇಡಿ. ಯುವ ಪೀಳಿಗೆಯು ನಾಡಿನ ಒಳಿತಿಗಾಗಿ ಸಮಾಜವನ್ನು ಕಟ್ಟುವ ಮತ್ತು ಬಂಧುತ್ವವನ್ನು ಕಾಪಾಡುವ ಕೈಂಕರ್ಯಕ್ಕೆ ಮುಂದಾಗಬೇಕಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಕರೆ ನೀಡಿದ್ದಾರೆ.
ಕರ್ನಾಟಕ ಪ್ರಾಂತೀಯ ಕಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2024ನೆ ಸಾಲಿನ ಸಂದೇಶ ಪ್ರಶಸ್ತಿಯನ್ನು ನಗರದ ಬಜ್ಜೋಡಿಯ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅವರು ಇತರ ಪುರಸ್ಕೃತರ ಪರವಾಗಿ ಮಾತನಾಡಿದರು.
ಸಂದೇಶ ಪ್ರತಿಷ್ಠಾನವು ಸಮಾಜವನ್ನು ಒಗ್ಗೂಡಿಸುವ ಸಂಸ್ಥೆಯಾಗಿದೆ. ಬಹುತ್ವಕ್ಕೆ ಹೆಚ್ಚು ಆದ್ಯತೆ ನೀಡುವುದರಲ್ಲೂ ಮುಂಚೂಣಿಯಲ್ಲಿದೆ. ಸಮನ್ವಯ-ಸಹಬಾಳ್ವೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ. ಬೇರೆ ಬೇರೆ ಭಾಷೆಯ, ಧರ್ಮದ ಜನರಲ್ಲಿ ಕುಟುಂಬದ ಕಲ್ಪನೆ ಮೂಡಿಸುತ್ತಿದೆ. ದ್ವೇಷಕ್ಕೆ ಕಡಿವಾಣ ಹಾಕಿ ನಾವೆಲ್ಲಾ ಮನುಜರು ಎಂಬ ಭಾವನೆ ಹುಟ್ಟು ಹಾಕುವ ಸಂದೇಶ ಪ್ರತಿಷ್ಠಾನದ ಪ್ರಶಸ್ತಿಯು ನಮ್ಮೆಲ್ಲರ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಪ್ರೊ. ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ‘ಸಂದೇಶದಲ್ಲಿ ಸದಾ ಬಹುಸಂಸ್ಕೃತಿಯನ್ನು ಕಾಣಬಹುದಾಗಿದೆ. ಈ ನೆಲದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವಲ್ಲಿ ‘ಸಂದೇಶ’ ಮಹತ್ವದ ಪಾತ್ರ ವಹಿಸುತ್ತಿದೆ. ಸಾಹಿತ್ಯವು ಕಿಟಕಿಯಿದ್ದಂತೆ. ಹಾಗಾಗಿ ಸಮಾಜವನ್ನು ‘ಸಾಹಿತ್ಯ’ದ ಕಿಟಕಿಯ ಮೂಲಕ ವೀಕ್ಷಿಸುವ ಅಗತ್ಯವಿದೆ. ಅದರೊಂದಿಗೆ ಭವಿಷ್ಯದ ಹಿತದೃಷ್ಟಿಯಿಂದ ನಾವೆಲ್ಲಾ ಸೌಹಾರ್ದ-ಸಹೋದರತ್ವದ ರಾಯಭಾರಿಗಳಾಗೋಣ’ ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರಿನ ಆರ್ಚ್ ಬಿಷಪ್ ಮತ್ತು ಕರ್ನಾಟಕ ಪ್ರಾದೇಶಿಕ ಬಿಷಪ್ ಸಮ್ಮೇಳನದ ಅಧ್ಯಕ್ಷ ಅ.ವಂ. ಡಾ.ಪೀಟರ್ ಮಚಾದೋ ‘ಕಲೆ, ಸಂಸ್ಕೃತಿ, ಮೌಲ್ಯವನ್ನು ಕಾಪಾಡುವ ಸಂಸ್ಥೆಗಳ ಪೈಕಿ ಸಂದೇಶ ಪ್ರತಿಷ್ಠಾನವು ಮುಂಚೂಣಿಯಲ್ಲಿದೆ. ಸಾಮಾರಸ್ಯಕ್ಕೆ ಒತ್ತು ನೀಡುವಲ್ಲಿ ಕಲೆ, ಸಂಸ್ಕೃತಿ, ಮೌಲ್ಯವು ತನ್ನದೇ ಆದ ಕೊಡುಗೆ ನೀಡಿದೆ’ ಎಂದರು.
ಬಳ್ಳಾರಿಯ ಬಿಷಪ್ ಮತ್ತು ಸಂಸ್ಥೆಯ ಅಧ್ಯಕ್ಷ ಅ ವಂ. ಡಾ. ಹೆನ್ರಿ ಡಿಸೋಜ ಮಾತನಾಡಿ ‘ವಿವಿಧ ಕ್ಷೇತ್ರದ ಸಾಧಕರ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಪ್ರತಿಷ್ಠಾನಕ್ಕೆ ಹೆಮ್ಮೆಯ ವಿಚಾರವಾಗಿದೆ. ಸಹಬಾಳ್ವೆಯು ನಮ್ಮೆಲ್ಲರ ಜೀವನದ ಕಲೆಯಾಗಬೇಕು. ಈ ನಿಟ್ಟಿನಲ್ಲಿ ಸಂದೇಶವು ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲಕ ಸಮಾಜವನ್ನು ಬೆಸೆಯುವ ಪ್ರಯತ್ನ ಮಾಡುತ್ತಿದೆ’ ಎಂದರು.
ಮಂಗಳೂರಿನ ಬಿಷಪ್ ಅ.ವಂ. ಡಾ. ಪೀಟರ್ ಪೌಲ್ ಸಲ್ದಾನ್ಹಾ ಮಾತನಾಡಿ ಸಂದೇಶವು ಹೃದಯ ಸಮಾಗಮದ ಕೇಂದ್ರವಾಗಿದೆ. ಬಂಧುತ್ವದ ಕನಸನ್ನು ಸಾಕಾರಗೊಳಿಸುವ ಈ ಪ್ರತಿಷ್ಠಾನದ ಪ್ರಶಸ್ತಿಗೆ ತನ್ನದೇ ಆದ ಮೌಲ್ಯವಿದೆ. ಇಂದಿನ ಪುರಸ್ಕೃತರು ಆ ಮೌಲ್ಯವನ್ನು ಹೆಚ್ಚಿಸಿದ್ದಾರೆ ಎಂದರು.
*ವಿವಿಧ ಕ್ಷೇತ್ರದ ಸಾಧಕರಾದ ಪ್ರೊ.ಬಿ.ಎ.ವಿವೇಕ ರೈ, ವಲೇರಿಯನ್ ಕ್ವಾಡ್ರಸ್, ಮುದ್ದು ಮೂಡುಬೆಳ್ಳೆ, ಅಬ್ದುಸ್ಸಲಾಮ್ ಪುತ್ತಿಗೆ, ಆಲ್ವಿನ್ ಡಿಕುನ್ಹಾ, ಕೆ. ಚಂದ್ರನಾಥ ಆಚಾರ್ಯ, ಹುಚ್ಚಮ್ಮ ಚೌದ್ರಿ (ಅವರ ಪರವಾಗಿ ಬಳ್ಳಾರಿಯ ಚಿನ್ನಪ್ಪ) ಹಾಗೂ ಜನಶಿಕ್ಷಣ ಟ್ರಸ್ಟ್ ಪರವಾಗಿ ಕೃಷ್ಣ ಮೂಲ್ಯ 2024ನೆ ಸಾಲಿನ ಸಂದೇಶ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಚಿನ್ನಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ನಿರ್ದೇಶಕ ವಂ. ಡಾ. ಸುದೀಪ್ ಪೌಲ್ ಸ್ವಾಗತಿಸಿದರು.
ಇತ್ತೀಚೆಗೆ ನಿಧನರಾದ ಪ್ರೊ. ಅಮೃತ ಸೋಮೇಶ್ವರ ಅವರಿಗೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು. ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ ಡಾ. ನಾ.ದಾ. ಶೆಟ್ಟಿ ನುಡಿನಮನ ಸಲ್ಲಿಸಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್, ರೂಪಕಲಾ ಆಳ್ವ, ಕಿಶೋರ್ ಗೊನ್ಸಾಲ್ವಿಸ್ ಹಾಜರಿದ್ದರು.
ಸ್ಟ್ಯಾನಿ ಆಲ್ವಾರೀಸ್, ರೇಮಂಡ್ ಡಿಕುನ್ಹಾ, ಸುನೀಲ್ ಕುಮಾರ್ ಬಜಾಲ್, ಡಾಲ್ಫಿ ಡಿಸೋಜ, ಶಾಲೆಟ್ ಪಿಂಟೋ, ಫ್ಲೋರಾ ಕ್ಯಾಸ್ಟಲಿನೋ, ಫ್ಲೋರಿನ್ ಡಿಸೋಜ, ರಾಮಾಂಜಿ ಉಡುಪಿ ಸನ್ಮಾನ ಪತ್ರ ವಾಚಿಸಿದರು.
ಪ್ರತಿಷ್ಠಾನದ ಟ್ರಸ್ಟಿ ರಾಯ್ ಕ್ಯಾಸ್ತಲಿನೊ ವಂದಿಸಿದರು. ಕನ್ಸೆಪ್ಟಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.