ಮಂಗಳೂರು: ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಮಾರಂಭ

ಮಂಗಳೂರು: ಕರ್ಣಾಟಕ ಬ್ಯಾಂಕ್ ವಿವಿಧ ಸೌಲಭ್ಯಗಳೊಂದಿಗೆ ದೇಶದಾದ್ಯಂತ ಸೇವೆ ನೀಡುತ್ತಾ ಬಂದಿದೆ. ಕರ್ಣಾಟಕ ಬ್ಯಾಂಕ್ 100 ವರ್ಷ ಪೂರ್ಣ ಗೊಳಿಸುತ್ತಿರುವ ಸಂದರ್ಭದಲ್ಲಿ ಕರ್ಣಾಟಕ ಯಾತ್ರೆಯ ಮೂಲಕ ಭಾರತವನ್ನು ಜೋಡಿಸ ಬೇಕಾಗಿದೆ ಎಂದು ಭಾರತ ಸರಕಾರದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ತಿಳಿಸಿದ್ದಾರೆ.
ಅವರು ಇಂದು ನಗರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಮಾರಂಭ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಭಾರತದ ಉತ್ತರದ ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ ಶತಮಾನದಲ್ಲಿ ಕರ್ಣಾಟಕ ಬ್ಯಾಂಕ್ ನ ವಿವಿಧ ಸೌಲಭ್ಯ ಗಳನ್ನು ದೇಶದ ಜನತೆಗೆ ವಿಸ್ತರಿಸಬೇಕಾಗಿದೆ ಎಂದು ಆರ್.ವೆಂಕಟರಮಣಿ ತಿಳಿಸಿದ್ದಾರೆ.
ಜಾಗತಿಕ ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಬ್ಯಾಂಕ್ ಕ್ಷೇತ್ರದಲ್ಲಿ ಏರಿಳಿತಗಳು ಉಂಟಾದ ಸಂದರ್ಭದಲ್ಲಿ ಭಾತದ ಬ್ಯಾಂಕ್ ಗಳು ಈ ಸವಾಲುಗಳನ್ನು ಎದುರಿಸಲು ಸಾಧ್ಯವಾಗಿದೆ.ಹಲವು ದೇಶಗಳಲ್ಲಿ ಬ್ಯಾಂಕ್ ಗಳು ಈ ಸವಾಲುಗಳನ್ನು ಎದುರಿಸಲು ಸಾಧ್ಯವಾಗದೆ ವಿಫಲವಾಗಿದೆ.ಕರ್ಣಾಟಕ ಬ್ಯಾಂಕ್ ನಂತಹ ಬ್ಯಾಂಕ್ ಗಳಿಂದ ದೇಶಕ್ಕೆ ಇನ್ನಷ್ಟು ಕೊಡುಗೆಯ ಅಗತ್ಯವಿದೆ ಎಂದರು.
ಶತಮಾನದ ಸಂಭ್ರಮದಲ್ಲಿರುವ ಕರ್ಣಾಟಕ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನಾ ಕೇಂದ್ರ ವನ್ನು ಆರಂಭಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
*ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಬ್ಯಾಂಕ್ ನ ಶತಮಾನದ ಸಂಭ್ರಮದ ಸಂದರ್ಭದಲ್ಲಿ ಶುಭ ಹಾರೈಸುತ್ತಾ, ಗ್ರಾಹಕರನ್ನು ಬಲಯುತರನ್ನಾಗಿ ಮಾಡಲು ಶ್ರಮಿಸುತ್ತಿರುವ ಕರ್ಣಾಟಕ ಬ್ಯಾಂಕ್ ಗೆ ಎಲ್ಲಾ ರೀತಿಯ ಸಹಕಾರ ವನ್ನು ರಾಜ್ಯ ಸರಕಾರ ನೀಡಲು ಸಿದ್ಧವಿದೆ. ದಕ್ಷಿಣ ಕನ್ನಡ ಹಲವು ಬ್ಯಾಂಕ್ ಗಳ ತವರು ನೆಲ. ಆದರೆ ದುರಾದೃಷ್ಟ ಹಲವು ಬ್ಯಾಂಕ್ ಗಳು ಬೇರೆ ಬ್ಯಾಂಕ್ ಗಳ ಜೊತೆ ವಿಲೀನವಾಗಿ ಇಂದು ನಮ್ಮ ನಡುವೆ ಇಲ್ಲ.ಕರ್ಣಾಟಕ ಬ್ಯಾಂಕ್ ಮುಂದಿನ ದಿನಗಳಲ್ಲಿ ಹಲವು ಬ್ಯಾಂಕ್ ಗಳನ್ನು ಸೆಳೆದುಕೊಂಡು ಕಳೆದುಕೊಂಡಿರುವುದನ್ನು ಪಡೆದು ಕೊಳ್ಳಬೇಕಾಗಿದೆ ಎಂದರು.
ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು, ಮಾನವ ಸಂಪನ್ಮೂಲ ಇದೆ ಈ ಮಾನವ ಸಂಪನ್ಮೂಲ ಹೊರ ದೇಶಗಳಲ್ಲಿ ಬಳಕೆಯಾಗುವ ಬದಲು ಇಲ್ಲಿ ಬಳಕೆಯಾಗಬೇಕಾಗಿದೆ ಎಂದರು.ಹಣ ಮತ್ತು ರಕ್ತ ಒಂದೇ ಕಡೆ ನಿಲ್ಲಬಾರದು ಅದು ನಿರಂತರವಾಗಿ ಹರಿಯುತ್ತಿರಬೇಕು. ಅದೇ ರೀತಿ ಕರ್ಣಾಟಕ ಬ್ಯಾಂಕ್ ಕೃಬಾಟಕ ರಾಜ್ಯವಾಗುವ ಮೊದಲೆ ಸ್ಥಾಪನೆಯಾದ ಬ್ಯಾಂಕ್ ಎಲ್ಲಾ ವರ್ಗದ ಜನರಿಗೆ ತನ್ನ ಸೌಲಭ್ಯ ಗಳ ಮೂಲಕ ನೆರವಾಗಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಭಾರತದ ಬ್ಯಾಂಕ್ ವ್ಯವಸ್ಥೆ ಇತರ ದೇಶಗಳಿಗೆ ಹೋಲಿಸಿದರೆ ಇನ್ನೂ ಸುಸ್ಥಿರ ವಾಗಿದೆ. ಶತಮಾನೋತ್ಸವದ ಸಂದರ್ಭ ಕರ್ಣಾಟಕ ಬ್ಯಾಂಕ್ ನ 15 ನೂತನ ಶಾಖೆಗಳಿಗೆ ಚಾಲನೆ ನೀಡಿದರು.ಶತಮಾನದ ಸಂದರ್ಭದಲ್ಲಿ 100 ರೂಪಾಯಿ ಬೆಳ್ಳಿ ಕವಚದ ನಾಣ್ಯ, ವಿಶೇಷ ಅಂಚೆ ಕವರ್,ವಿಶೇಷ ವೆಬ್ ಸೈಟನ್ನು ಬಿಡುಗಡೆಗೊಳಿಸಿದರು.
ಬ್ಯಾಂಕ್ ನ ಎಂ.ಡಿ. ಹಾಗೂ ಸಿಇಒ ಶ್ರೀಕೃಷ್ಣನ್ ಎಚ್ ಸ್ವಾಗತಿಸಿ ಬ್ಯಾಂಕಿನ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಕರ್ಣಾಟಕ ಬ್ಯಾಂಕ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡುತ್ತಾ, ಕಳೆದ 100 ವರ್ಷಗಳಲ್ಲಿ ಬ್ಯಾಂಕ್ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ. ಬದ್ಧತೆಯೊಂದಿಗೆ, ವೃತ್ತಿ ಪರತೆಯೊಂದಿಗೆ ಆಧುನಿಕ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಕಾರ್ಯ ನಿರ್ವಹಿಸಿ ಬಲಿಷ್ಠವಾಗಿ ಬೆಳೆದು ದೇಶಾದ್ಯಂತ ಗ್ರಾಹಕರ ವಿಶ್ವಾಸಗಳಿಸಿದೆ ಎಂದರು.
ಬ್ಯಾಂಕ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್ ರಾವ್ ವಂದಿಸಿದರು. ಮಂಗಳೂರು ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್ ರಾವ್ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಖ್ಯಾತ ಗಾಯಕರಾದ ಶಂಕರ ಮಹಾದೇವನ್, ವಿಜಯ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಚೈತ್ರಾ ವಾಸುದೇವನ್ ನಿರೂಪಿಸಿದರು.







