ನಳ್ಳಿ ನೀರು ಜೋಡನೆ ಸಂಬಂಧ ತಾ.ಪಂ.ಇಒ - ಹಳೆಯಂಗಡಿ ಗ್ರಾ.ಪಂ. ಸದಸ್ಯರ ನಡುವೆ ಜಗಳ; ಪ್ರಕರಣ ದಾಖಲು

ಹಳೆಯಂಗಡಿ: ನಳ್ಳಿ ನೀರು ಜೋಡನೆ ಸಂಬಂಧ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಪಂಚಾಯತ್ ಅಧ್ಯಕ್ಷರು, ಸದಸ್ಯರ ನಡುವೆ ನಡೆದ ಜಗಳ ಸಂಬಂಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುಶಾಂತಪ್ಪ ಅವರು ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಸಹಿತ ಪಂಚಾಯತ್ ಸದಸ್ಯರು ಸೇರಿ ಎಂಟು ಮಂದಿಯ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರಕರಣ ಎ1 ಆರೋಪಿ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಅವರು ಇತರ ಆರೋಪಿಗಳೊಂದಿಗೆ ಸೇರಿ ಸರಕಾರಿ ಕರ್ತವ್ಯಕ್ಕೆ ಟಡ್ಡಿ ಪಡಿಸಿರುವ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅನುಚಿತ ವರ್ತನೆ ತೋರಿದ್ದಾರೆ. ಆರೋಪಿಗಳು ಸರಕಾರಿ ವಾಹನಕ್ಕೆ ಅಡ್ಡಿಯಾಗಿ ನಿಂತು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುಶಾಂತಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅಧಿಕಾರಿಯ ದೂರು ಆಧರಿಸಿ ಮುಲ್ಕಿ ಪೊಲೀಸರು ಪ್ರಮುಖ ಆರೋಪಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸಹಿತ ಗ್ರಾ.ಪಂ. ಸದಸ್ಯರ ವಿರುದ್ಧ ಕಲಂ 143, 341, 353, 504, 506 ಜೊತೆಗೆ ಐ.ಪಿ.ಸಿ. ಸೆಕ್ಷನ್ 149ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.





