ಮಳವೂರು: ಪಾಲಿಕೆ ನೀರು ಫಲಾನುಭವಿಗಳಿಗೆ ದೊರೆಯಲಿ; ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ

ಮಂಗಳೂರು: ಮಳವೂರು ಕಿಂಡಿ ಅಣೆಕಟ್ಟು ಮುಖ್ಯವಾಗಿ ಸ್ಥಳೀಯ ಗ್ರಾಮಗಳ ಜಲ ಸಮಸ್ಯೆ ನಿವಾರಿಸಲು ಮಾಡಲಾ ಗಿದ್ದು, ಗ್ರಾಮದ ಜನರಿಗೆ ತೊಂದರೆಯಾಗದಂತೆ ಪಾಲಿಕೆ ನೀರು ಬಳಸಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಶಾಸಕ, ಕಿಂಡಿ ಅಣೆಕಟ್ಟಿನ ರುವಾರಿ ವಿಜಯಕುಮಾರ್ ಶೆಟ್ಟಿ ಹೇಳಿದ್ದಾರೆ.
ಕಿಂಡಿ ಅಣೆಕಟ್ಟು ನಿರ್ಮಿಸಲು ಸ್ಥಳೀಯ ಪಂಚಾಯತ್ಗಳು, ವ್ಯಾಪರಸ್ಥರು ಹಾಗೂ ಜನರ ಉದಾರ ದೇಣಿಗೆಯ ಪಾಲಿದೆ.ಮನೆ ಮನೆಗೆ ತೆರಳಿ ಸಹಕಾರ ಯಾಚಿಸಿದ್ದೆವು. ಜತೆಗೆ ಎಸ್.ಎಂ ಕೃಷ್ಣ ಅವರ ಮುಖ್ಯಮಂತ್ರಿ ಕಾಲಾವಧಿಯಲ್ಲಿ ಸರಕಾರದಿಂದ ಆನುದಾನ ಬಂದಿತ್ತು.
ಕಿಂಡಿ ಅಣೆಕಟ್ಟು ನಿರ್ಮಾಣದ ವೇಳೆ ಬಂಟ್ವಾಳ ಮತ್ತಿತರ ಪ್ರದೇಶಕ್ಕೆ ಹರಿಯುವ ನೀರು ತಡೆಯಾಗುವ ಭೀತಿಯಿಂದ ಅಲ್ಲಿನ ವಿರೋಧ ಸಮಸ್ಯೆ ಎದುರಾದರೂ ಲೆಕ್ಕಿಸದೆ ಸ್ಥಳೀಯ ಮಳವೂರು, ಬಜಪೆ, ಚೇಳ್ಯಾರು, ಪೆರ್ಮುದೆ ಸಹಿತ ಗ್ರಾಮದ ಜನರ ಹಿತದೃಷ್ಠಿಯಿಂದ ಮಾಡಿ ಇಂದು ನೀರಿನ ಸಮಸ್ಯೆಯಿಂದ ಮುಕ್ತವಾಗಿದೆ ಎಂದು ಹೇಳಿದ್ದಾರೆ.
ನಗರದ ಜನತೆಗೆ ನೀರು ಹರಿಸುವ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ದೇಶ ಉತ್ತಮವಾಗಿದ್ದರೂ , ಅಣೆಕಟ್ಟು ನೀರಿನ ಫಲಾನುಭವಿ ಗ್ರಾಮದ ಜನರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಮುಂದಾಗಬೇಕು ಎಂದು ವಿಜಯಕುಮಾರ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.







