ಸಿದ್ದು ಸರಕಾರದಿಂದ ರೈತರಿಗೆ ಅನ್ಯಾಯ: ಎಸ್.ಆರ್ ಪಾಟೀಲ್ ನಡಹಳ್ಳಿ ಆರೋಪ
ಮಂಗಳೂರು : ರಾಜ್ಯದಲ್ಲಿ ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರವಿದ್ದಾಗ ಕೇಂದ್ರ ಸರಕಾರ ರೈತರಿಗಾಗಿ ನೀಡುತ್ತಿರುವ ರೈತ ಸಮ್ಮಾನ ನಿಧಿಗೆ ರಾಜ್ಯದ ಪಾಲಿನಿಂದ 4,000 ರೂ. ಸೇರಿಸಿ ಪ್ರತಿ ರೈತರ ಖಾತೆಗೆ ವಾರ್ಷಿಕ 10,000 ರೂ.ನೀಡಲಾಗುತ್ತಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗಲೂ ಅದು ಮುಂದುವರಿದಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಂದ ತಕ್ಷಣ ರೈತರ ಖಾತೆಗೆ ನೇರ ವರ್ಗಾವಣೆಯಾಗುವ ಈ ಹಣವನ್ನು ನಿಲ್ಲಿಸಲಾಗಿದೆ. ಆ ಮೂಲಕ ಕಾಂಗ್ರೆಸ್ ರೈತರಿಗೆ ಅನ್ಯಾಯ ಎಸಗಿದೆ ಎಂದು ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್ ಪಾಟೀಲ್ ನಡಹಳ್ಳಿ ಹೇಳಿದರು.
ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರೈತ ಹೆಣ್ಣು ಮಕ್ಕಳು ಮತ್ತು ಹೈನುಗಾರಿಕೆಯನ್ನು ನಂಬಿಕೊಂಡಿರುವವರಿಗೆ ನೆರವಾಗಲೆಂದು ಯಡಿಯೂರಪ್ಪ2008ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಹಾಲು ಉತ್ಪಾದಕ ರೈತ ಕುಟುಂಬಗಳಿಗೆ ಹಾಲಿನ ಪ್ರೋತ್ಸಾಹಧನವಾಗಿ ಲೀಟರಿಗೆ 2 ರೂ. ಕೊಡುತ್ತಿದ್ದರು. ನಂತರ ಬೊಮ್ಮಾಯಿ ಸರಕಾರದಲ್ಲಿ ಅದಕ್ಕೆ 3 ರೂ.ಗಳನ್ನು ಸೇರಿಸಿ 5 ರೂ. ಪ್ರೋತ್ಸಾಹ ಕೊಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂತೋ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನೂ ನಿಲ್ಲಿಸಿಬಿಟ್ಟರು ಎಂದು ನಡಹಳ್ಳಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಬಿ.ಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಯಾಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ನಾಗರಾಜ ಮೂಡುಬಿದಿರೆ, ರಾಧಾಕೃಷ್ಣ ಬೋರ್ಕರ್ ಪುತ್ತೂರು ಉಪಸ್ಥಿತರಿದ್ದರು.