ಸಾಲ ಸಂಸ್ಥೆಗಳಿಂದ ಕಿರುಕುಳ ಆರೋಪ: ಸಂತ್ರಸ್ತ ಮೀನುಗಾರ ಕುಟುಂಬಗಳ ನೆರವಿಗೆ ಡಿವೈಎಫ್ಐ ಒತ್ತಾಯ
![ಸಾಲ ಸಂಸ್ಥೆಗಳಿಂದ ಕಿರುಕುಳ ಆರೋಪ: ಸಂತ್ರಸ್ತ ಮೀನುಗಾರ ಕುಟುಂಬಗಳ ನೆರವಿಗೆ ಡಿವೈಎಫ್ಐ ಒತ್ತಾಯ ಸಾಲ ಸಂಸ್ಥೆಗಳಿಂದ ಕಿರುಕುಳ ಆರೋಪ: ಸಂತ್ರಸ್ತ ಮೀನುಗಾರ ಕುಟುಂಬಗಳ ನೆರವಿಗೆ ಡಿವೈಎಫ್ಐ ಒತ್ತಾಯ](https://www.varthabharati.in/h-upload/2024/04/03/1258193-3-bengre-dyfi.webp)
ಮಂಗಳೂರು: ಕರಾವಳಿಯಲ್ಲಿ ಮೀನಿನ ಕ್ಷಾಮ ಎದುರಾಗಿದ್ದು, ಮೀನುಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮೀನುಗಾರಿಕೆ ಯನ್ನು ನಂಬಿರುವ ಕುಟುಂಬಗಳು ಆರ್ಥಿಕ ಬಿಕ್ಕಟ್ಟಿನ ಹೊಡೆತದಿಂದ ತತ್ತರಿಸಿಹೋಗಿದೆ. ಅನೇಕ ಬೋಟುಗಳು ಲಂಗರು ಹಾಕಿವೆ. ಮೀನುಗಾರಿಕೆಗೆ ತೆರಳುವ ಬೋಟುಗಳು ವಾಪಸ್ ಬರುತ್ತಿದೆ. ಬೋಟ್ ಮಾಲಕರು ಬ್ಯಾಂಕ್ ಸಾಲ ಸಂದಾಯ ಮಾಡಲು ಪರದಾಡುತ್ತಿದ್ದಾರೆ. ಈ ಮಧ್ಯೆ ಸ್ವ ಸಹಾಯ ಸಂಘಗಳ ಮೂಲಕ ಕಿರು ಸಾಲ ಪಡೆದ ಕುಟುಂಬಗಳು ಮತ್ಸ್ಯಕ್ಷಾಮದಿಂದಾಗಿ ಸಾಲ ಮರು ಪಾವತಿ ಮಾಡಲಾಗದೆ ಕಂಗಾಲಾಗಿದ್ದಾರೆ. ಸ್ವಸಹಾಯ ಸಂಘಗಳು ಸಾಲ ವಸೂಲಾತಿಗಾಗಿ ಪ್ರತಿನಿಧಿಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ. ಜಿಲ್ಲಾಡಳಿತವು ಇವರ ನೆರವಿಗೆ ಬರಬೇಕು ಎಂದು ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಒತ್ತಾಯಿಸಿದ್ದಾರೆ.
ನಗರದ ಕಸಬಾ ಬೆಂಗರೆಯಲ್ಲಿ ಬುಧವಾರ ಸಾಲ ಸಂತ್ರಸ್ತ ಮೀನುಗಾರ ಕುಟುಂಬಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೀನುಗಾರಿಕಾ ವೃತ್ತಿಯಲ್ಲಿರುವ ಒರಿಸ್ಸಾ, ತಮಿಳುನಾಡು ಮೂಲದ ವಲಸೆ ಕಾರ್ಮಿಕರು ಕೆಲಸವಿಲ್ಲದೆ ಬರಿಗೈಯಲ್ಲಿ ಆಯಾ ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ. ಮಂಗಳೂರಿನ ಮೀನುಗಾರಿಕಾ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಕೇಳುವವರೇ ಇಲ್ಲವಾಗಿದೆ. ಹಾಗಾಗಿ ಮೀನಿನ ಕ್ಷಾಮವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಇಮ್ತಿಯಾಝ್ ಆಗ್ರಹಿಸಿದರು.
ಸಾಲ ಪಡೆದ ಸಂತ್ರಸ್ತರ ಪರವಾಗಿ ರೇಷ್ಮಾ,ಸುಹಾನಾ,ಸೌದಾ,ರಝಿಯಾ ಮಾತನಾಡಿದರು.
ಡಿವೈಎಫ್ಐ ನಗರ ಅಧ್ಯಕ್ಷ ಜಗದೀಶ್ ಬಜಾಲ್, ಜಿಲ್ಲಾ ಸಹ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ, ಸಿಪಿಎಂ ಬೆಂಗರೆ ಕಾರ್ಯದರ್ಶಿ ಎಬಿ ನೌಷಾದ್, ಗ್ರಾಮ ಸಮಿತಿ ಅಧ್ಯಕ್ಷ ಹನೀಫ್ ಬೆಂಗ್ರೆ, ಮುಖಂಡರಾದ ಜಂಶೀರ್ ಬೆಂಗ್ರೆ ಉಪಸ್ಥಿತರಿದ್ದರು.